– ನಾನು ಸಿಎಂ ಆದ್ಮೇಲೆ 3ನೇ ಮಕ್ಕಳಾದ್ರೆ ಎಲ್ಲಾ ಸೌಲಭ್ಯ ಫ್ರೀ
– ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುಗೆ
ದಾವಣಗೆರೆ: ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರ್ತಾರೆ. ಮೋದಿಗಿಂತ ದಿಟ್ಟ ನಿರ್ಧಾರ ಕೈಗೊಳ್ತಾರೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಸಿಎಂ ಆದ್ರೆ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಡಿ ಗ್ರಾಮದ ಧರ್ಮ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಪಕ್ಷದಿಂದ ಉಚ್ಚಾಟನೆ ಆದಾಗ ಅಮಿತ್ ಶಾ ಮರಳಿ ಬಿಜೆಪಿ ಕರೆತಂದಿದ್ದರು. ಯಡಿಯೂರಪ್ಪ ಅಲ್ಲ ನನ್ನ ಹಿರಿತನ ನೋಡಿದ್ರೆ ನಾನೇ ಸಿಎಂ ಆಗಬೇಕು. ಆದ್ರೆ ನನಗೆ ಮಂತ್ರಿ ಸಹ ಮಾಡಲಿಲ್ಲ ಯಡಿಯೂರಪ್ಪ. ಆವಾಗಿಂದನೇ ತುಳಿಯುತ್ತಾ ಬಂದಿದ್ದಾರೆ, ಕೊನೆಗೆ ಮದ್ದೂರಿನಿಂದ ಎದ್ದೇ. ರಾಜ್ಯದಲ್ಲಿ ಪಕ್ಷದಿಂದ ಉಚ್ಚಾಟನೆ ಆದವರೆಲ್ಲಾ ಸಿಎಂ ಆಗಿದ್ದಾರೆ. ನಾನು ಯಾಕೆ ಆಗಬಾರದು ಅಂತ ಪ್ರಶ್ನಿಸಿದರು.
ಮುಂದುವರಿದು.. ರಾಜ್ಯದಲ್ಲಿ ಡಿಜೆ ಪರವಾನಿಗೆಯಿಲ್ಲ. ಆದ್ರೆ ನಮ್ಮ ವಿಜಯಪುರದಲ್ಲಿ ಮಾತ್ರ ಡಿಜೆ ಪರವಾನಿಗೆ ಇದೆ. ನಾಳೆ ನಾನು ಸಿಎಂ ಆಗುವಾಗ ಜೆಸಿಬಿ ಸಹಿತ ಪ್ರಮಾಣ ವಚನ ಸ್ವೀಕರಿಸುವೆ. ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನೇ ಮುಂದೆ ಬಿಡುತ್ತೇನೆ. ಈಗ ಮೋದಿ ಇದ್ದಾರೆ ಮುಂದೆ ಯೋಗಿ ಬರಲಿದ್ದಾರೆ. ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಾರೆ. ಇದಕ್ಕೆ ಸುಧಾರಿಸಿಕೊಳ್ಳಬೇಕು ಅಂದ್ರೆ 2028ರ ವರೆಗೆ ಸಿಎಂ ಆಗಿ ಉಳಿತೀರಿ. ಇಲ್ಲಾದ್ರೆ ಇಷ್ಟರಲ್ಲಿ ಸರ್ಕಾರ ಪತನವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ಗೆ ಸಿಎಂ ಆಗೋಕೆ ಬಿಡಲ್ಲ. ಹಿಂದೂಗಳು ಜನಸಂಖ್ಯೆ ಹೆಚ್ಚಾಗಬೇಕು. ನಾನು ಸಿಎಂ ಆದ್ರೆ 3ನೇ ಮಕ್ಕಳಾದ್ರೆ ಎಲ್ಲಾ ಉಚಿತ ಸೌಲಭ್ಯ. ಮದ್ವೆಗೆ 5 ಲಕ್ಷ ರೂಪಾಯಿ ಸಹ ಉಚಿತ ಕೊಡುವೆ. ಸಾಬರು 25 ಅಡಿತಾರೆ ನಾವು ಕಟ್ಟಿದ ತೆರಿಗೆಯನ್ನೇ ಅವರೇ ತಿಂದು ತೇಗುತ್ತಾರೆ ಅಂತ ಲೇವಡಿ ಮಾಡಿದರು.
ಇದೇ ವೇಳೆ ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಕೆಜೆಹಳ್ಳಿ-ಡಿಜೆಹಳ್ಳಿ ಕೇಸ್ನಲ್ಲಿ ಅಂದಿನ ಸಿಎಂ ಬೊಮ್ಮಾಯಿ ವೈಫಲ್ಯ ಕಾರಣ. ಆರಗಜ್ಞಾನೇಂದ್ರ, ಬೊಮ್ಮಾಯಿ ಅವರ ಕೈಗೆ ಅಧಿಕಾರ ಕೊಟ್ಟು ಹಾಳಾಯಿತು. ವೀರಶೈವ ಲಿಂಗಾಯತ ಒಂದು ಎಂದು ಕೆಲವರು ಹೇಳುತ್ತಿದ್ದಾರೆ. ಅವೇ ಮೂರು ಕುಟುಂಬಗಳು ಒಂದು ಯಡಿಯೂರಪ್ಪ, ಶಾಮನೂರು ಹಾಗೂ ಖಂಡ್ರೆ ಅವರು. ತಮ್ಮ ಕುಟುಂಬದ ರಾಜಕೀಯಕ್ಕಾಗಿ ಸಮಾಜ ಬಳಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಯಡಿಯೂರಪ್ಪ ವೀರಶೈವ ಲಿಂಗಾಯತರು ಜಗಳವಾಡಬೇಡಿ ಅಂತಾರೆ. ಮೊದಲು ಅವರ ನಿಲುವೇನು ಅಂತ ಸ್ಪಷ್ಟಪಡಿಸಲಿ. ಮೊದಲು ತಂದೆ ಲೂಟಿ ಮಾಡಿದ್ದಾನೆ. ಈಗ ಮಗ ಲೂಟಿಮಾಡಲು ತಂದೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.