ಬೆಂಗಳೂರು: ಕುಡಿದು ಬಿಲ್ ಕೊಡುವ ವಿಚಾರಕ್ಕೆ ಬಾರಿನಲ್ಲಿ ಗಲಾಟೆಯಾಗಿದ್ದು, ಪುಂಡರು ಲಾಂಗು, ಮಚ್ಚು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿ ಮಂಜುನಾಥ್ ಬಾರಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಮಂಜುನಾಥ್ ಬಾರಿಗೆ ಇಬ್ಬರು ಯುವಕರು ಬಂದಿದ್ದಾರೆ. ಬಳಿಕ ಬಿಯರ್ ತೆಗೆದುಕೊಂಡು ಕುಡಿದಿದ್ದಾರೆ. ಆದರೆ ಹಣ ಮಾತ್ರಕೊಟ್ಟಿಲ್ಲ. ಬಿಯರ್ ಹಣ ಕೊಟ್ಟಿಲ್ಲ ಅಂತ ಕ್ಯಾಶಿಯರ್ ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ನಮ್ಮ ಬಳಿ ಹಣ ಕೇಳುತ್ತೀಯಾ ಎಂದು ಅವಾಜ್ ಹಾಕಿದ್ದಾರೆ. ಕೊನೆಗೂ ಹಣ ಕೊಡದೆ ಯುವಕರು ವಾಪಸ್ ಹೋಗಿದ್ದರು.
ಮತ್ತೆ ರಾತ್ರಿ ಸುಮಾರು 8.00 ಗಂಟೆಗೆ 8 ಮಂದಿ ಯುವಕರು ಒಟ್ಟಾಗಿ ಬಾರಿಗೆ ಬಂದಿದ್ದಾರೆ. ನಂತರ ಏಕಾಏಕಿ ಯುವಕರು ಹಣ ಕೇಳಿದ್ದಕ್ಕೆ ಹಲ್ಲೆ ಮಾಡಲು ಮುಂದಾಗಿದ್ದು, ಬಾರ್ ಸಪ್ಲೈಯರ್ ಹುಡುಗ, ಕ್ಯಾಶಿಯರ್ ಸೇರಿದಂತೆ ಮೂವರ ಮೇಲೆ ಲಾಂಗ್ನಿಂದ ಬೀಸಿದ್ದಾರೆ. ಪರಿಣಾಮ ಮೂವರಿಗೆ ಕೈ, ತಲೆ ಸೇರಿದಂತೆ ಹಲವೆಡೆ ಗಾಯವಾಗಿದೆ. ಇನ್ನೋರ್ವ ಕೈಯಲ್ಲಿ ಪಿಸ್ತೂಲ್ ಹಿಡಿದು ಎಲ್ಲರನ್ನು ಬೆದರಿಸಿದ್ದಾನೆ.
ಹಲ್ಲೆ ಮಾಡಿ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳದಲ್ಲಿದ್ದವರು ಹಲ್ಲೆಗೊಳಗಾದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಕ್ಯಾಶಿಯರ್ ನೀಡಿದ ದೂರು ಆಧರಿಸಿ ಕೇಸ್ ದಾಖಲಾಗಿದ್ದು, ಈ ಘಟನೆ ಸಂಬಂಧ ಪೊಲೀಸರು ಉದಯ್, ಚಂದ್ರ ಮತ್ತು ಬೀರೇಶ್ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಆವಲಹಳ್ಳಿ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv