ಗದಗ: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆಯ ನಂತರವು ಬ್ಯಾಂಕುಗಳ ಪದೇ ಪದೇ ಸಾಲ ಮರುಪಾವತಿಸುವ ಬಗ್ಗೆ ನೋಟಿಸ್ಗಳನ್ನು ನೀಡುತ್ತಿರುವುದರಿಂದ ರೈತರು ಕಂಗಲಾಗಿ ಹೋಗಿದ್ದಾರೆ.
ಹೌದು, ಒಂದಡೆ ರೈತರ ಸಾಲಮನ್ನಾ ಎಂದು ಕುಮಾರಸ್ವಾಮಿ ಸರ್ಕಾರ ಬೀಗುತ್ತಿದ್ದರೆ, ಮತ್ತೊಂದಡೆ ಬ್ಯಾಂಕ್ನಿಂದ ರೈತರಿಗೆ ನೋಟಿಸ್ ಬರುವುದು ನಿಲ್ಲುತ್ತಿಲ್ಲ. ಹೀಗಾಗಿ ಸಿಎಂ ಅವರು ಸಾಲಮನ್ನಾ ಮಾಡಿರುವುದು ನಿಜವೇ ಎಂಬುದು ರೈತರ ಪ್ರಶ್ನೆಯಾಗಿದೆ.
ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸಾಕಷ್ಟು ರೈತರಿಗೆ ನೋಟಿಸ್ ಪತ್ರ ಹೋಗುತ್ತಿವೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಾಗಪ್ಪ ಹಂಚಿನಾಳ ಎಂಬ ರೈತನಿಗೆ ಸಾಲ ಹಾಗೂ ಬಡ್ಡಿ ಮರುಪಾವತಿಸುವಂತೆ ಗದಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೋಟಿಸ್ ಜಾರಿಮಾಡಿದೆ. ಈ ನೋಟಿಸ್ ತಲುಪಿದ 7 ದಿನಗಳಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿ ಬ್ಯಾಂಕ್ಗೆ ಜಮಾ ಮಾಡಬೇಕು. ಸಮಯಕ್ಕನುಸಾರವಾಗಿ ಬಡ್ಡಿ ಪಾವತಿಸದಿದ್ದರೇ, ಎನ್ಪಿಎ ಮಾಡುವ ಮೂಲಕ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿನೊಂದಿಗೆ ವ್ಯವಹರಿಸಲು ಅನಾನುಕೂಲದ ಬೆದರಿಕೆಯನ್ನು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ನಾಗಪ್ಪ 2013 ಆಗಸ್ಟ್ 2 ರಲ್ಲಿ 4 ಲಕ್ಷ ರೂಪಾಯಿ ಬೆಳೆಸಾಲವನ್ನು ಬ್ಯಾಂಕಿನಿಂದ ಪಡೆದಿದ್ದೆ. ಆದರೆ ಸತತ ಮೂರು-ನಾಲ್ಕು ವರ್ಷಗಳ ಬರಗಾಲ ಇದ್ದರಿಂದ ಸಾಲ ಹಾಗೂ ಬಡ್ಡಿ ಮರುಪಾವತಿಸಿರಲಿಲ್ಲ. ಸರ್ಕಾರ ಸಾಲಮನ್ನಾ ಜಾರಿ ಮಾಡಿ ತಿಂಗಳುಗಳಾದರೂ, ಬ್ಯಾಂಕಿನವರು ನೋಟಿಸ್ ನೀಡಿದ್ದಾರೆ. ಬರಗಾಲದ ವೇಳೆ ಸಾಲದ ಮೊತ್ತ ಹಾಗೂ ಬಡ್ಡಿಯನ್ನು ತುಂಬಲೇ ಬೇಕೆಂದರೆ ಸಾವೊಂದೆ ಇದಕ್ಕೆ ಪರಿಹಾರ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv