ಬೆಂಗಳೂರು: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಹೊಸ ಪದವೀಧರರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿಗಳನ್ನ ಹಾಕಲು ಸೂಚಿಸಿದ್ದು, ಈಗಾಗಲೇ ಅರ್ಜಿಗಳನ್ನ ಸ್ವೀಕರಿಸಿ ವೇರಿಫಿಕೇಶನ್ ಮಾಡಲಾಗುತ್ತಿದೆ.
ಪದವೀಧರ ಮತದಾರರು ಬುದ್ಧಿವಂತರಾಗಿದ್ದು, ಅಭ್ಯರ್ಥಿಗಳ ಅಮಿಷಗಳಿಗೆ ಒಳಗಾಗೋದಿಲ್ಲ ಎಂಬುವುದು ಸಾಮಾನ್ಯರ ಅಭಿಪ್ರಾಯ. ಆದ್ರೆ ಅವಿದ್ಯಾವಂತರನ್ನ ಪದವೀಧರ ಮತದಾರರ ಪಟ್ಟಿಗೆ ಸೇರಿಸಿ ಅವರಿಂದ ಮತಗಳನ್ನ ಪಡೆಯಲು ಕಾಣದ ಕೈಗಳು ಕೆಲಸ ಮಾಡಿವೆ. ಬೆಂಗಳೂರಿನ ವಾರ್ಡ್ ನಂ12 ಶೆಟ್ಟಿಹಳ್ಳಿಯ ಕಮ್ಮಗೊಂಡನಹಳ್ಳಿಯಲ್ಲಿ ಕೆಲವರು ಬ್ಯಾಂಕ್ ಲೋನ್ಗೆ ಅಂತಾ ಕೊಟ್ಟಿದ್ದ ದಾಖಲೆಗಳನ್ನ ಬಳಸಿ ನಕಲಿ ಪದವಿಪತ್ರವನ್ನ ಸೃಷ್ಟಿಸಿ ಪದವೀಧರ ಮತದಾರರ ಪಟ್ಟಿಗೆ ಸೇರಿಸೋ ಪ್ರಯತ್ನ ನಡೆದಿದೆ. ಅಬ್ಬಿಗೆರೆ ಬಿಬಿಎಂಪಿ ಕಚೇರಿಗೆ 160ಕ್ಕೂ ಹೆಚ್ಚು ಅರ್ಜಿಗಳು ವೇರಿಫಿಕೇಶನ್ ಗೆ ಬಂದಿದೆ.
ಅರ್ಜಿ ನೋಡಿದ ವ್ಯಕ್ತಿಗಳು ಫುಲ್ ಶಾಕ್ ಆಗಿದ್ದು, ನಾವ್ಯಾರೂ ಡಿಗ್ರಿ ಮಾಡಿಲ್ಲ. ನಾವು ಓದಿರೋದೇ 3, 4ನೇ ಕ್ಲಾಸ್ವರೆಗೆ. ನಮಗೆ ಬೇರೆ ಬೇರೆ ವಿಶ್ವವಿದ್ಯಾಲಯದ ಪದವಿ ಪತ್ರಗಳನ್ನ ಯಾರು ನೀಡಿದ್ದಾರೋ ಗೊತ್ತಿಲ್ಲ ಅಂತಾ ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಕಮ್ಮಗೊಂಡನಹಳ್ಳಿಯ ನಿವಾಸಿಗಳ ದಾಖಲೆಗಳು ಹೇಗೆ ಪದವೀಧರರ ಪಟ್ಟಿಗೆ ಸೇರ್ಪಡೆಯಾದವು ಎಂಬುದನ್ನು ಬೆನ್ನತ್ತಿದ್ದಾಗ ಸ್ಫೋಟಕ ಗೋಲ್ಮಾಲ್ ಬೆಳಕಿಗೆ ಬಂದಿದೆ.
ಏನದು ಗೋಲ್ಮಾಲ್?: ಬ್ಯಾಂಕ್ ಲೋನ್ಗೆ ಅಂತಾ ವೆಳ್ಳೀಯಮ್ಮ ಅನ್ನೋ ಸಮಾಜ ಸೇವಕಿಗೆ ಕಮ್ಮಗೊಂಡನಹಳ್ಳಿಯ ನಿವಾಸಿಗಳು ದಾಖಲೆ ಪತ್ರಗಳು ಮತ್ತು 4 ಫೋಟೋ ಕೊಟ್ಟಿದ್ದರು. ವೆಳ್ಳೀಯಮ್ಮ ಮಹಿಳಾ ಸಂಘಟನೆಯೊಂದರ ಕಾರ್ಯಕರ್ತೆ ವಿಜಯನಗರದ ಕಸ್ತೂರಿಗೆ ದಾಖಲೆಗಳನ್ನ ಕೊಟ್ಟಿದ್ದಾರೆ. ಕಸ್ತೂರಿ ನಾನ್ಯಾರಿಗೂ ನಿಮ್ಮ ದಾಖಲೆಗಳನ್ನ ನೀಡಿಲ್ಲ, ನನ್ನ ಬಳಿಯೇ ಇದೆ. ಬೇಕಾದ್ರೇ ಕೊಡ್ತೀನಿ ಅಂತಾರೆ. ದಾಖಲೆಗಳನ್ನ ವಾಪಸ್ ಪಡೆಯಲು ಹೋದರೆ, ದಾಖಲೆ ಪತ್ರಗಳನ್ನು ಸರಿಯಾಗಿ ತೋರಿಸಿದ್ದು, ನೀಡಿರುವ 4 ಫೋಟೊಗಳಲ್ಲಿ 1 ಫೋಟೋ ಮಾತ್ರ ಕೊಟ್ಟಿದ್ದಾರೆ.
ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರುವ ಅಂಶವೆಂದರೆ ದಾಖಲೆಗಳ ಪತ್ರಗಳನ್ನ ಜೆರಾಕ್ಸ್ ಮಾಡಿ ಅದಕ್ಕೆ ನಕಲಿ ಪದವಿ ಪತ್ರವನ್ನ ಸೃಷ್ಠಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಯಾರೋ ಪ್ರಯತ್ನಪಟ್ಟಿದ್ದಾರೆ. ಕೇವಲ ಒಂದು ವಾರ್ಡ್ ನಲ್ಲಿ ಹೀಗಾದರೆ ಇಡೀ ರಾಜ್ಯದಲ್ಲಿ ಎಷ್ಟು ಗೋಲ್ಮಾಲ್ ನಡೆದಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ.