ಬೆಂಗಳೂರು: ಶಾಸಕ ಶ್ರೀನಿವಾಸ್ಗೌಡ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಅವಕಾಶ ಕೋರಿ ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
ಶ್ರೀನಿವಾಸ್ಗೌಡ ನನಗೆ ಎಸ್.ಆರ್ ವಿಶ್ವನಾಥ್ ಮತ್ತು ಇನ್ನಿತರ ಕಮಲ ನಾಯಕರು ಬಿಜೆಪಿಗೆ ಸೇರುವಂತೆ ಹಣ ಆಮಿಷ ಒಡ್ಡಿದ್ದರು ಎಂದು ಇಂದು ಸದನದಲ್ಲಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಹಕ್ಕು ಚ್ಯುತಿ ಮಂಡನೆಗೆ ಅವಕಾಶ ಕೋರಿ ಪತ್ರ ಬರೆದಿದ್ದಾರೆ.
ಈ ಹಿಂದೆ ಇದೇ ರೀತಿಯ ಆರೋಪ ಮಾಡಿದ್ದ ಶ್ರೀನಿವಾಸ್ ಗೌಡ ಅವರ ವಿರುದ್ಧ ಎಸಿಬಿ ತನಿಖೆ ಮಾಡಿತ್ತು. ಈ ತನಿಖೆಯ ವೇಳೆ ಶ್ರೀನಿವಾಸ್ ಗೌಡ ಅವರು ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದರು. ಈಗ ಮತ್ತೆ ಸದನದಲ್ಲಿ ಈ ವಿಚಾರ ಮಾತನಾಡಿದ್ದಾರೆ. ಹೀಗಾಗಿ ಅವರು ಯಾವುದೇ ದಾಖಲೆಗಳಿಲ್ಲದೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದು ಶಾಸಕನಾಗಿ ನನ್ನ ಕರ್ತವ್ಯ ಪಾಲಿಸಲು ನನ್ನ ಹಕ್ಕಿಗೆ ಚ್ಯುತಿ ಮಾಡಿದ್ದಾರೆ. ಅದ್ದರಿಂದ ಹಕ್ಕು ಚ್ಯುತಿ ಮಂಡನೆಗೆ ಅವಕಾಶ ನೀಡಿ ಎಂದು ಸ್ಪೀಕರ್ ಗೆ ಎಸ್.ಆರ್ ವಿಶ್ವನಾಥ್ ಮನವಿ ಮಾಡಿದ್ದಾರೆ.
ಆರೋಪವೇನು?
ಇಂದು ಸದನದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ್ಗೌಡ ಬಿಜೆಪಿ ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರು ಸೇರಿ ನಮ್ಮ ಮನೆಗೆ ನೇರವಾಗಿ 5 ಕೋಟಿ ತಂದು ಕೊಟ್ಟಿದ್ದರು. ಆದರೆ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದು ಗಂಭೀರ ಆರೋಪ ಮಾಡಿದ್ದರು.