ಕೋಲಾರ: ಬರದ ನಾಡು ಕೋಲಾರಕ್ಕಿಂದು ಐತಿಹಾಸಿಕ ದಿನ, ಕಳೆದ 60 ವರ್ಷಗಳಿಂದ ನಿರೀಕ್ಷೆಯ ಕಣ್ಣುಗಳಿಂದ ಕಾದು ಕುಳಿತಿದ್ದ ಲಕ್ಷಾಂತರ ಮನಸ್ಸುಗಳಿಗೆ ತೃಪ್ತಿಯಾದ ದಿನ. ಕಳೆದ ಅರವತ್ತು ವರ್ಷಗಳ ಬೇಡಿಕೆ ಇಂದು ಈಡೇರಿದ ಸಂತೃಪ್ತಿ ಒಂದೆಡೆಯಾದ್ರೆ, ಬರಗಾಲದ ಕರಿನೆರಳು ದೂರವಾಗುತ್ತಾ ಅನ್ನೋ ನಿರೀಕ್ಷೆ ಚಿನ್ನದ ನಾಡಿನ ಜನರದ್ದು.
ಕೆ.ಸಿ.ವ್ಯಾಲಿ ಯೋಜನೆಯ ನೀರು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದ ಸಂದರ್ಭ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ನಮ್ಮ ತಾಯಿ ಜ್ಞಾಪಕಕ್ಕೆ ಬರುತ್ತಿದ್ದಾಳೆ, ನನ್ನಿಂದ ಈ ರೀತಿಯ ಒಳ್ಳೆ ಕಾರ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಆನಂದಭಾಷ್ಪ ಹಾಕಿದ್ದಾರೆ.
ಕೋಲಾರ ಜಿಲ್ಲೆಯ ಜನ ಕಳೆದ 60 ವರ್ಷಗಳಿಂದ ಮಾಡಿದ ನೂರಾರು ಹೋರಾಟ, ಉಪವಾಸ, ಕಣ್ಣೀರು, ಆಕ್ರೋಶ, ಎಲ್ಲದಕ್ಕೂ ಇಂದು ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಲಾದ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯ ನೀರು ಇಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಕೆರೆಯನ್ನು ಪ್ರವೇಶಿಸಿದೆ.
1400 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಯೋಜನೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಇನ್ನು ಸಣ್ಣ ಪುಟ್ಟ ಮಾರ್ಪಾಟುಗಳನ್ನ ಸರಿಪಡಿಸಿದ ನಂತರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ವೆಂಕಟೇಶ್ ತಿಳಿಸಿದ್ದಾರೆ.
ಕಳೆದ ಒಂದುವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಡಿಗಲ್ಲು ಹಾಕಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ರು. ಅಲ್ಲದೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ಕುಮಾರ್ ಈ ಯೋಜನೆಗಾಗಿ ಇನ್ನಿಲ್ಲದ ಹೋರಾಟಗಳನ್ನು ಮಾಡಿದ್ರು. ಯೋಜನೆಗೆ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಲು ಸತಾಯಿಸಿದ್ದು, ಬೆಂಗಳೂರು ನಗರ ವ್ಯಾಪ್ತಿ ಯಲ್ಲಿ ಪೈಪ್ಲೈನ್ ಅಳವಡಿಸುವ ಕಾರ್ಯದಲ್ಲಿ ಆದ ಸಾಕಷ್ಟು ಅಡೆತಡೆಗಳು, ಅಕಾಲಿಕ ಮಳೆ ಇದೆಲ್ಲವನ್ನು ನಿಭಾಯಿಸಿಕೊಂಡು ಚುನಾವಣೆಗೆ ಮುನ್ನ ನೀರು ತರಬೇಕೆಂದು ಪ್ರಯತ್ನ ಮಾಡಿದ್ದರು ಎಂದು ಸ್ಥಳೀಯರಾದ ಕೆಎಸ್ ಗಣೇಶ್ ತಿಳಿಸಿದರು.
ಸಂಸ್ಕರಿಸಿದ ತ್ಯಾಜ್ಯ ನೀರು ಜಿಲ್ಲೆಗೆ ಬಂದಿದ್ದು ಖುಷಿಯಾದ್ರು, ಇದರಿಂದ ಏನಾದ್ರು ಅಪಾಯ ಆಗಬಹುದಾ ಅನ್ನೋ ಆತಂಕವನ್ನು ಜನರಲ್ಲಿದೆ.