ಬೆಂಗಳೂರು: ನನಗೆ ಕನ್ನಡ ಮಾತನಾಡಲು ಕಷ್ಟ ಎಂದಿದ್ದ ಕಿರಿಕ್ ಬ್ಯೂಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.
ಕನ್ನಡ ಮಾತನಾಡಲು ತುಂಬಾ ಕಷ್ಟ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆಂದು ಕನ್ನಡ ಪರ ಹೋರಾಟಗಾರ ನಾಗೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದು ತೆಲಗು ತಮಿಳಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಎಂದು ಹೇಳಿದ್ದಾರೆ. ಅದ್ದರಿಂದ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದೆಂದು ಫಿಲ್ಮ್ ಚೇಂಬರ್ ಗೆ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ರಶ್ಮಿಕಾ ಆಂಗ್ಲ ಭಾಷೆ ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಟಾಲಿವುಡ್ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲುಗು ಮಾತನಾಡಲು ಆರಂಭಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಕನ್ನಡ ವಿರೋಧಿ ಎಂದು ಅನೇಕರು ಪೋಸ್ಟ್ ಹಾಕಿದ್ದಾರೆ.