ಬೆಂಗಳೂರು: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಚಿವ ಡಿಕೆ ಶಿವಕುಮಾರ್, ಅವರೊಬ್ಬ ಉತ್ತಮ ಸಂಸದೀಯ ಪಟು, ಅವರಲ್ಲಿ ನಾನು ವಿಶೇಷ ಗುಣವನ್ನು ಕಂಡಿದ್ದೆ ಎಂದು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಹೆಣ್ಣುಮಗಳಾಗಿ ಸವಾಲನ್ನು ಮೆಟ್ಟಿನಿಂತವರು ಸುಷ್ಮಾ ಸ್ವರಾಜ್. ಪಂಜಾಬ್, ಹರ್ಯಾಣದಲ್ಲಿ ಉತ್ತಮ ಸಂಘಟಕಿಯಾಗಿದ್ದರು. ಅವರಲ್ಲಿ ನಾನು ವಿಶೇಷ ಗುಣವನ್ನು ಕಂಡಿದ್ದೆ. ಅವರ ಆದರ್ಶ ಜೀವನ ಮುಂದಿನವರಿಗೆ ದಾರಿದೀಪ ಎಂದು ಹೇಳಿದ್ದಾರೆ.
ಮೃತಪಡುವ ವಯಸ್ಸು ಅವರದ್ದಲ್ಲ. ದೆಹಲಿ ಚುನಾವಣೆ ವೇಳೆ ಸುಷ್ಮಾ ಸ್ವರಾಜ್ ಅವರ ಎದುರು ನಿಂತು ನಾನು ಕೆಲಸ ಮಾಡಿದ್ದೆ. ಅವರೆಂದೂ ವಿರೋಧ ಪಕ್ಷದವರನ್ನು ತುಚ್ಛವಾಗಿ ಕಂಡಿರಲಿಲ್ಲ. ನಮ್ಮ ಬಳ್ಳಾರಿಯಲ್ಲೂ ಚುನಾವಣೆಗೆ ನಿಂತಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.
ಮಂತ್ರಿ ಮಂಡಲ ರಚನೆ ಆಗದೇ ಇರುವ ಕಾರಣ ಬಿಎಸ್ವೈ ಮೇಲೆ ಕಿಡಿಕಾರಿದ ಡಿಕೆಶಿ, ಇದೇ ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಅಸ್ತವ್ಯಸ್ತಗೊಂಡರೆ ಬಿಎಸ್ವೈ ದೆಹಲಿಯಲ್ಲಿ ಠಿಕಾಣಿ ಹಾಕಿದ್ದಾರೆ. ಇದು ಯಡಿಯೂರಪ್ಪನವರ ಸ್ಟೈಲ್. ಅವರಿಗೇ ಏನ್ ಕಷ್ಟ ಇದೆಯೋ? ಅವರು ಬಹಳ ಆತುರದಲ್ಲಿದ್ದಾರೆ. ಅವರ ಆತುರವನ್ನು ಜನ ಗಮನಿಸುತ್ತಿದ್ದಾರೆ. 10 ದಿನ ಕಳೆದರೂ ಒನ್ ಮ್ಯಾನ್ ಶೋ ಆಗಿದೆ ಸರ್ಕಾರ. ಪಾಪ ಅವರಂತೆ ನಾನು ಆತುರದಲ್ಲಿ ಏನನ್ನೂ ಹೇಳಲ್ಲ ಎಂದು ಹೇಳಿದರು.