ಬೆಂಗಳೂರು: ಬಂಜಾರ ಸಮುದಾಯದ ಹಿರಿಯ ಮುಖಂಡ ಹಾಗೂ ಬೆಂಗಳೂರು ಎಸ್ಸಿ-ಎಸ್ಟಿ ನೌಕರರ ಕಲ್ಯಾಣ ಸಂಘಟನೆಯ ಅಧ್ಯಕ್ಷ ಗುರು ಎಂ.ಚವಾಣ್ ಅವರು ಆಮ್ ಆದ್ಮಿ ಪಾರ್ಟಿ ಸೇರಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರು ಚವಾಣ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಬೆಂಗಳೂರು ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿದರು. ಈ ವೇಳೆ ಅವರು, ಕೇಂದ್ರೀಯ ವಿದ್ಯಾಲಯ ಸಂಘಟನಾ ಮೇಲ್ವಿಚಾರಕರಾಗಿ, ಜನಪದ ವಿಶ್ವವಿದ್ಯಾಲಯದ ಬೆಂಗಳೂರು ಜಿಲ್ಲಾ ಕ್ಷೇತ್ರ ಪ್ರತಿನಿಧಿಯಾಗಿ ಹಾಗೂ ಬೆಂಗಳೂರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘಟನೆ ಅಧ್ಯಕ್ಷರಾಗಿ ಗುರು ಚವಾಣ್ ಅವರು ಸಮಾಜಕ್ಕಾಗಿ ದುಡಿದರು. ಇದನ್ನೂ ಓದಿ: ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್
ಲಂಬಾಣಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ಶ್ರಮಿಸಿದ್ದಾರೆ. ಸುಮಾರು 30 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ನಾಯಕರು ಆಮ್ ಆದ್ಮಿ ಪಾರ್ಟಿಯನ್ನು ಸೇರುತ್ತಿರುವುದು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಿದರು.
ಗುರು ಚವಾಣ್ ಅವರು ಮಾತನಾಡಿ, ದೇಶ ಹಾಗೂ ರಾಜ್ಯವನ್ನು ಆಳಿದ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ದಲಿತರು ಹಾಗೂ ಹಿಂದುಳಿದ ಸಮುದಾಯದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅದನ್ನು ಬಿಟ್ಟು ಆ ವರ್ಗಗಳ ಜನರ ಏಳಿಗೆಗೆ ಶ್ರಮಿಸಲಿಲ್ಲ. ಆದರೆ ಆಮ್ ಆದ್ಮಿ ಪಾರ್ಟಿಯು ಬಂಜಾರ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಡಳಿತದಲ್ಲಿ ಅಲ್ಲಿನ ಎಲ್ಲ ಸಮುದಾಯಗಳಿಗೆ ಅನುಕೂಲವಾಗುತ್ತಿದೆ. ಕರ್ನಾಟಕದಲ್ಲೂ ಅದೇ ಮಾದರಿಯ ಆಡಳಿತ ಬರಬೇಕು ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಪ್ರದಾನ ಕಾರ್ಯದರ್ಶಿ ಜಗದೀಶ್ಚಂದ್ರ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಂತಹ ಭ್ರಷ್ಟ ಪಕ್ಷಗಳನ್ನು ಕರ್ನಾಟಕದ ಜನತೆ ತಿರಸ್ಕರಿಸಲು ಆರಂಭಿಸಿದ್ದಾರೆ. ಕೇಜ್ರಿವಾಲ್ ಅವರ ಪಾರದರ್ಶಕ ಹಾಗೂ ಜನಪರ ಆಡಳಿತದತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಯುವಕರು, ಗಣ್ಯರು, ಸಾಧಕರು ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಲ್ಲಿ ಬಾಯ್ ರಣವೀರ್ ಚಿತ್ರಕ್ಕೆ ಚಾರ್ಲಿ ಚಾಪ್ಲಿನ್ನಿಂದ ಪ್ರೇರಣೆ?
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡ ಬೋಪಣ್ಣ ಹಾಗೂ ಇನ್ನಿತರ ಮುಖಂಡರು, ಗುರು ಚವಾಣ್ ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.