ಬಳ್ಳಾರಿ: ನಕಲಿ ಬಂಗಾರ (Fake Gold) ಇಟ್ಟು ಬ್ಯಾಂಕ್ (Bank) ಸಿಬ್ಬಂದಿಯಿಂದಲೇ 19 ಲಕ್ಷ ರೂ. ವಂಚನೆ ಎಸಗಿದ ಘಟನೆ ಸಿರುಗುಪ್ಪ ಪಟ್ಟಣದ ಆಕ್ಸಿಸ್ ಬ್ಯಾಂಕ್ನಲ್ಲಿ ನಡೆದಿದ್ದು ಮೂವರು ಬ್ಯಾಂಕ್ ಸಿಬ್ಬಂದಿ ವಿರುದ್ದ ಕೇಸ್ ದಾಖಲಾಗಿದೆ.
ಅಡಮಾನ ವಿಭಾಗದ ಮುಖ್ಯಸ್ಥ ಕಾರ್ತಿಕ್, ಶ್ರೀನಿವಾಸ್ ಮತ್ತು ಅಕ್ಕಸಾಲಿಗ ರಾಮನಗೌಡ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ವರ್ಷ ಈ ಮೂವರು ಆರೋಪಿಗಳು ಸಿರುಗುಪ್ಪ ಆಕ್ಸಿಸ್ ಬ್ಯಾಂಕ್ನಿಂದ ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾಗಿ ಒಂದು ವರ್ಷದ ಬಳಿಕ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: Ind vs Pak ಬ್ಲಾಕ್ಬಸ್ಟರ್ ಪಂದ್ಯದ VIP ಟಿಕೆಟ್ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ
ಹೇಮಾವತಿ ಎನ್ನುವವರ ಹೆಸರಿನಲ್ಲಿ 339 ಗ್ರಾಂ ಬಂಗಾರ ಅಡವಿಟ್ಟು 10.35 ಲಕ್ಷ ರೂ. ಸಾಲ ನೀಡಿದ್ದಾರೆ. ಬಳಿಕ ಆಡಿಟ್ ಮಾಡುವ ಸಂದರ್ಭದಲ್ಲಿ ನಕಲಿ ಬಂಗಾರಕ್ಕೆ ಸಾಲ ನೀಡಿರುವುದು ಪತ್ತೆಯಾಗಿದೆ.
ಯಾಸೀನ್ ಎನ್ನುವರು 42 ಗ್ರಾಂ ಚಿನ್ನ ಇಟ್ಟು, ವರ್ಷದ ನಂತರ ಸಾಲ ತೀರಿಸಲು ಬಂದಾಗ ಅಕೌಂಟ್ ಕ್ಲೋಸ್ ಆಗಿ ಚಿನ್ನ ಮಾಯವಾಗಿದೆ.
ಬಸವರಾಜ್ ಎನ್ನುವರು ಚಿನ್ನದ ಸಾಲ ಕಟ್ಟಿದ್ರೂ ಅವರ 4.2 ಗ್ರಾಂ ಉಂಗುರ ಮಾಯವಾಗಿದೆ. ವಿವಿಧ ರೀತಿಯಲ್ಲಿ ಮೂವರು ಆರೋಪಿಗಳು ಒಟ್ಟು 19 ಲಕ್ಷ ರೂ. ವಂಚನೆ ಮಾಡಿರುವುದು ಬ್ಯಾಂಕ್ ತನಿಖೆಯಿಂದ ಬೆಳಕಿಗೆ ಬಂದಿದೆ.