ನವದೆಹಲಿ: ನೂತನ ಅಬಕಾರಿ ನೀತಿ ಪ್ರಕರಣಕ್ಕೆ (Liquor Policy Case) ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ (Arvind Kejriwal) ರೋಸ್ ಅವೆನ್ಯೂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಮನ್ಸ್ ಹಿನ್ನೆಲೆ ಶನಿವಾರ ಕೋರ್ಟ್ ಮುಂದೆ ಅರವಿಂದ್ ಕೇಜ್ರಿವಾಲ್ ಹಾಜರಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು. ವಿಚಾರಣೆ ಬಳಿಕ 15,000 ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಮತ್ತು 1 ಲಕ್ಷ ರೂ. ವೈಯಕ್ತಿಕ ಬಾಂಡ್ನೊಂದಿಗೆ ಜಾಮೀನು ಮಂಜೂರು ಮಾಡಲಾಯಿತು. ಇದನ್ನೂ ಓದಿ: ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? – EVM ಬೇಡವೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಎಂ ಅರವಿಂದ್ ಕೇಜ್ರಿವಾಲ್ 8 ಬಾರಿ ಸಮನ್ಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಇಡಿ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಖುದ್ದು ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು.
ಇಂದು ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ನ್ಯಾಯಾಧೀಶರ ಮುಂದೆ ಹಾಜರಾಗುತ್ತಿದ್ದಂತೆ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ಒಪ್ಪಿತು. ಬಳಿಕ ಕೇಜ್ರಿವಾಲ್ ಕೋರ್ಟ್ನಿಂದ ಹೊರ ಬಂದರು. ಇನ್ನು ಕೇಜ್ರಿವಾಲ್ ವಿಚಾರಣೆ ಹಿನ್ನೆಲೆ ಕೋರ್ಟ್ ಮುಂದೆ ಭಾರಿ ಭದ್ರತೆ ಒದಗಿಸಲಾಗಿತ್ತು. ಈ ಹಿಂದೆ ಇಡಿ ಸಲ್ಲಿಸಿದ ದೂರಿನ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ಕೇಜ್ರಿವಾಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನೂ ಓದಿ: ಚುನಾವಣಾ ಬಾಂಡ್ ಪ್ರಕರಣ – ಅಸಮರ್ಪಕ ಮಾಹಿತಿ ನೀಡಿದ ಎಸ್ಬಿಐಗೆ ಮತ್ತೆ ಸುಪ್ರೀಂ ತರಾಟೆ