ಬಾಗಲಕೋಟೆ: ನನ್ನ ರಕ್ತದ ಕಣಕಣದಲ್ಲೂ ಕನ್ನಡ ಇದೆ. ನಾನೊಬ್ಬ ಕನ್ನಡಿಗ ಎಂದು ತೋಟಗಾರಿಕಾ ಸಚಿವ ಕೆ.ಸಿ ನಾರಾಯಣಗೌಡ ಹೇಳಿದ್ದಾರೆ.
ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ವೇಳೆ ನಗರದಲ್ಲಿ ಮಾತನಾಡುತ್ತಾ ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗಿದರ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನೊಬ್ಬ ಬಡ ಕುಟುಂಬದಲ್ಲಿ ಜನ್ಮ ಪಡೆದವನು. ಹೊಟ್ಟೆ ಬಟ್ಟೆಗಾಗಿ ಮಹಾರಾಷ್ಟ್ರಕ್ಕೆ ಹೋದವನು. ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ, ಬೆಳೆದಿದ್ದೀವಿ. ನಾನೊಬ್ಬನೇ ಅಲ್ಲ, ಓನ್ಲಿ ಬಾಂಬೆಯಲ್ಲಿ 27 ಲಕ್ಷ ಜನ ಕನ್ನಡಿಗರಿದ್ದೇವೆ. ಅಲ್ಲಿ ಬೆಳಗ್ಗೆ, ಸಾಯಂಕಾಲ ಕನ್ನಡದಲ್ಲೇ ಕಾರ್ಯಕ್ರಮ ಮಾಡುತ್ತೇವೆ. ಕನ್ನಡವನ್ನೇ ನಾವು ಹೊಗಳುತ್ತೇವೆ ಎಂದು ಹೇಳಿದರು.
ಮೊನ್ನೆ 17 ರಾಜ್ಯಗಳ ಅತಿಥಿಗಳು ಬಂದಿದ್ರು. ನಾನೂ ಅಲ್ಲಿ ಎಲ್ಲ ರಾಜ್ಯಗಳನ್ನು ಹೊಗಳಿ ಮಾತನಾಡಿದ್ದೇನೆ. ಕೇವಲ ಮಹಾರಾಷ್ಟ್ರ ಅಷ್ಟೇ ಹೊಗಳಿಲ್ಲ. ಯಾರೋ ಕಿಡಿಗೇಡಿಗಳು ರಾಜಕಾರಣ ಉಪಯೋಗಿಸಿ ಅಷ್ಟನ್ನೇ ಕಟ್ ಮಾಡಿ ತೋರಿಸಿದ್ದಾರೆ. ನನ್ನ ರಕ್ತ, ರಕ್ತದಲ್ಲಿ ಕನ್ನಡ ಅನ್ನೋದು ಇದೆ. ನಾನೊಬ್ಬ ಕನ್ನಡಿಗ. ಮಹಾರಾಷ್ಟ್ರದಲ್ಲಿ ಬಿಸಿನೆಸ್ ಮಾಡುತ್ತೀನಿ ಅಂತ ಸಮರ್ಥಿಸಿಕೊಂಡರು.
ಇದೇ ವೇಳೆ ತೋಟಗಾರಿಕೆ ವಿವಿ ಕುಲಪತಿ ನೇಮಕ ವಿಚಾರ ಈಗಷ್ಟೇ ಇಲಾಖೆ ಚಾರ್ಜ್ ತಗೊಂಡಿದ್ದೀನಿ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿ ಶೀಘ್ರ ನೇಮಕ ಮಾಡಲಾಗುವುದು ಎಂದರು.
ಮಹಾರಾಷ್ಟ್ರಕ್ಕೆ ಜೈ:
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಫೆಬ್ರವರಿ 20ರಂದು ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು, ಮಹಾರಾಷ್ಟ್ರದ ಕಲಾತಂಡದ ಕುರಿತು ಮಾತನಾಡುವ ವೇಳೆ ಮಹಾರಾಷ್ಟ್ರಕ್ಕೆ ಜೈ ಎಂದಿದ್ದಾರೆ. ಈಗ ನಾನು ಏನೇ ಆಗಿದ್ದರೂ ಅದು ಮಹಾರಾಷ್ಟ್ರದಿಂದ. 25 ವರ್ಷಗಳ ಹಿಂದೆ ಮುಂಬೈಗೆ ಹೋಗಿ ಹೋಟೆಲ್ ಉದ್ಯಮಿಯಾಗಿ ಬಿಲ್ಡರ್ ಆಗಿ, ಅದಾದ ಮೇಲೆ ಇಲ್ಲಿಗೆ ಬಂದು ರಾಜಕಾರಣಿಯಾದೆ. ನನ್ನನ್ನು ಉದ್ಯಮಿಯನ್ನಾಗಿ ಮಾಡಿದ್ದೇ ಮಹಾರಾಷ್ಟ್ರ. ಜೈ ಮಹಾರಾಷ್ಟ್ರ ಮತ್ತು ಜೈ ಶಿವಾಜಿ ಮಹಾರಾಜ್ ಎಂದು ಹೇಳಲು ಬಯಸುತ್ತೇನೆ. ಇಂದು ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಎಂದರೆ ಅದು ಮಹಾರಾಷ್ಟ್ರದ್ದು. ಜೈ ಮಹಾರಾಷ್ಟ್ರ ಎಂದು ಹೇಳಿದ್ದರು.
ಭಾಷಣವನ್ನು ಪೂರ್ತಿಯಾಗಿ ಹಿಂದಿಯಲ್ಲೇ ಮಾಡಿರುವ ನಾರಾಯಣಗೌಡ, ಮಹಾರಾಷ್ಟ್ರದ ಪರ ಜೈಕಾರವನ್ನೂ ಕೂಗುವ ಮೂಲಕ ಇದೀಗ ಟೀಕೆಗೆ ಒಳಗಾಗಿದ್ದು, ಈ ವಿಡಿಯೋ ಇದೀಗ ಸಖತ್ ಸದ್ದು ಮಾಡಿತ್ತು.