ಬಾಗಲಕೋಟೆ: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಇಂದು ವಿದ್ಯಾರ್ಥಿಗಳು ಪ್ರಾರ್ಥನೆ, ವಿಶೇಷ ಪೂಜೆ ನೆರವೇರಿಸಿದರು.
ನಗರದ ಅಖಿಲ ಭಾರತ ಮಧ್ವಮಹಾಮಂಡಳದ ವಸತಿ ನಿಲಯದ ವಿದ್ಯಾರ್ಥಿಗಳು ಈ ಪೂಜೆಯನ್ನು ನೆರವೇರಿಸಿದ್ದಾರೆ. ಬಾಗಲಕೋಟೆಯ ನವನಗರದ 8ನೇ ಸೆಕ್ಟರ್ನ ವಸತಿ ನಿಲಯವಿರುವ ಶ್ರೀಕೃಷ್ಣ ಮಠದಲ್ಲಿ ಪಾರಾಯಣ, ಶ್ರೀಕೃಷ್ಣ ಪೂಜೆ ನೆರವೇರಿಸಿ ಪ್ರಾರ್ಥಿಸಿದ ವಿದ್ಯಾರ್ಥಿಗಳು ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿಕೊಂಡರು.
ಧನ್ವಂತರಿ ಜಪ, ಸುಳಾದಿಗಳು, ವಾಯುಸ್ತುತಿ, ವಿಷ್ಣುಸಹಸ್ರನಾಮ, ರಾಯರ ಸ್ತೋತ್ರ ಪಾರಾಯಣ ಮಾಡಿ ಶ್ರೀಗಳ ಆರೋಗ್ಯ ವೃದ್ಧಿಸಲಿ ಎಂದು ಪ್ರಾರ್ಥನೆ ನೆರವೇರಿಸಲಾಯಿತು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸ್ವಾಮೀಜಿಗಳಿಗೆ ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ಮಠದ ಮೂಲಗಳು ತಿಳಿಸಿವೆ.