– ಗ್ರಾಮ ವಾಸ್ತವ್ಯ ಜನರನನ್ನು ಡೈವರ್ಟ್ ಮಾಡೋ ಗಿಮಿಕ್
ಬಾಗಲಕೋಟೆ: ರಾಜ್ಯದಲ್ಲಿ 166 ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ದನಕರುಗಳಿಗೆ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಜನರು ಗುಳೆ ಹೊರಟಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ನಮ್ಮ ಸಿಎಂ ಯಾವುದೋ ಒಂದು ಹಳ್ಳಿಯಲ್ಲಿ ಮಲಗಿ ಎದ್ದು ಬಂದರೆ ಏನು ಪ್ರಯೋಜನ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಸಿಎಂ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಒಂದು ಗಿಮಿಕ್ ಅಷ್ಟೇ. ಒಂದೊಂದು ಜಿಲ್ಲೆಯ ಒಂದು ಹಳ್ಳಿಗೆ ಹೋಗಿ ಮಲಗಿಕೊಂಡ ಬಂದರೆ ಯಾರಿಗೂ ಪ್ರಯೋಜನವಿಲ್ಲ ಎಂದು ಸಿಎಂಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ 39,407 ಕಂದಾಯ ಗ್ರಾಮಗಳಿದ್ದಾವೆ. 58,648 ಜನ ವಸತಿ ಪ್ರದೇಶಗಳಿವೆ, ನಾವು ಎಲ್ಲಕಡೆ ಹೋಗಿ ಗ್ರಾಮ ವಾಸ್ತವ್ಯ ಮಾಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾವು ಮಾಡುವ ಕೆಲಸ ಇಡೀ ರಾಜ್ಯಕ್ಕೆ ಸಾರ್ವತ್ರಿಕವಾಗಿ ಪ್ರಯೋಜನವಾಗಬೇಕು ಎಂದರು. ಸಿಎಂ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ರೆ ಬೆಳಗಾವಿ, ಕಲಬುರ್ಗಿ, ಮೈಸೂರು, ಬೆಂಗಳೂರು ಭಾಗದಲ್ಲಿ ಸಭೆ ಮಾಡಿ, ಅಧಿಕಾರಿಗಳಿಗೆ ಚಾಟಿ ಬೀಸಿ ಕೆಲಸ ಮಾಡೋಕೆ ಹೇಳಿದ್ದರೆ ಉಪಯೋಗ ಆಗುತಿತ್ತು ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ ಜೆಡಿಎಸ್ ಜನಪ್ರಿಯತೆ ಗಳಿಸಿಕೊಂಡಿದ್ದರೆ, 37 ಸೀಟ್ ಅಷ್ಟೇ ಯಾಕೆ ಗೆಲ್ಲುತ್ತಿತ್ತು, 124 ಸೀಟ್ ಗೆಲ್ಲುತ್ತಿತ್ತು. ಅಲ್ಲದೆ ಸಿಎಂ ಆಡಳಿತ ನಡೆಸಲು ಕಾಂಗ್ರೆಸ್ನವರು ಸಹಕಾರ ಕೊಡುತ್ತಿಲ್ಲ. ಅದಕ್ಕೆ ಸಿಎಂ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಗ್ರಾಮ ವಾಸ್ತವ್ಯದ ಗಿಮಿಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.