ಬಾಗಲಕೋಟೆ: ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕೆಲ ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಎಚ್.ವೈ.ಮೇಟಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರ (30) ಪತಿ ಹಾಗೂ ಅತ್ತಿಯ ಜೊತೆಗೆ ನವನಗರದ 42ನೇ ಸೆಕ್ಟರ್ ನಲ್ಲಿ ವಾಸವಾಗಿದ್ದಾರೆ. ಶನಿವಾರ ಮನೆಯಲ್ಲಿ ಎಲ್ಲರೂ ಇದ್ದಾಗಲೇ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಏಕಾಏಕಿ ವಿಜಯಲಕ್ಷ್ಮಿ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ. ಘಟನೆಯಲ್ಲಿ ವಿಜಯಲಕ್ಷ್ಮಿ ಅವರ ಮುಖ ಹಾಗೂ ಅಂಗೈಗೆ ಗಾಯವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯಲಕ್ಷ್ಮಿ ಸರೂರ, ಕಳೆದ ತಿಂಗಳು ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನಾನು ತಪ್ಪಿಸಿಕೊಂಡಿದ್ದೆ. ಆದರೆ ಶನಿವಾರ ಮತ್ತೆ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಮಾಜಿ ಸಚಿವ ಎಚ್.ವೈ.ಮೇಟಿ ಅವರೇ ಈ ಕೃತ್ಯವನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯಪುರದ ರೇಷ್ಮಾ ಪಡೆಕನವತ ರೀತಿಯಲ್ಲೇ ನನ್ನ ಕೊಲೆಯಾಗುತ್ತದೆ. ನನಗೆ ರಕ್ಷಣೆ ಕೊಡಿ ಅಂತ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.