ನವದೆಹಲಿ: ಕರ್ನಾಟಕದಲ್ಲಿ ಬಿಸಿಲ ಪ್ರತಾಪ ದಿನೇ ದಿನೇ ಕಾಡುತ್ತಿದ್ದರೆ ಉತ್ತರ ಭಾರತದಲ್ಲಿ (North India) ಮಳೆ, ಹಿಮದ ಆರ್ಭಟ ಶುರುವಾಗಿದೆ. ಉತ್ತರಾಖಂಡ್ನ (Uttarakhand) ಬದರಿನಾಥ ದೇಗುಲದ (Badrinath Temple) 3 ಕಿ.ಮೀ. ಸಮೀಪದಲ್ಲಿ ಹಿಮಸ್ಫೋಟವಾಗಿದೆ.
ಹಿಮಸ್ಫೋಟದಿಂದ (Avalanche) ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 32 ಕಾರ್ಮಿಕರನ್ನು ರಕ್ಷಿಸಲಾಗಿದೆ. ಚಮೋಲಿ ಜಿಲ್ಲೆಯಲ್ಲಿ ಏಕಾಏಕಿ ಹಿಮಪರ್ವತ ಜಾರಿ ಬಂದಿದ್ದು, ಘಸ್ತೋಲಿಗೆ ಸಂಪರ್ಕ ಕಲ್ಪಿಸುವ ಮಾನಾ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಯಮುನಾ ಸ್ವಚ್ಛತೆಗೆ ಮಿಷನ್ ಮೋಡ್; ಮಾಸ್ಟರ್ ಪ್ಲ್ಯಾನ್ ಸಿದ್ಧ
ಹಿಮದಡಿ ಸಿಲುಕಿರುವ 25 ಕಾರ್ಮಿಕರಿಗಾಗಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಐಟಿಪಿಬಿ, ಬಿಆರ್ಓ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ. ಸಿಎಂ ಧಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ.
ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ
ಶಿಮ್ಲಾ, ಚಂಬಲ್, ಕಿನ್ನೌರ್, ಲಹೌಲ್ನಲ್ಲೂ ಹಾನಿಯಾಗಿದೆ. ಕಿರಾತ್ಪುರ- ಮನಾಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿಮ್ಲಾ- ಕಿನ್ನೌರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತವಾಗಿದೆ. ಕುಲು, ಮಂಡಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ಜಾಮ್ ಉಂಟಾಗಿದೆ. ಬಿಯಾಸ್, ಉಹಾಲ್ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) ದಟ್ಟ ಹಿಮ ಬೀಳುತ್ತಿದೆ. ಉತ್ತರಾಖಂಡ್ನ ಪರ್ವತ ಪ್ರದೇಶದಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂಟಿಮೀಟರ್ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ಗಳಲ್ಲೂ ಗುಡುಗು-ಸಿಡಿಲು-ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.