– ಭರತ್ ರೆಡ್ಡಿ ಇಷ್ಟು ಸ್ಪೀಡ್ ಒಳ್ಳೆಯದಲ್ಲ, ಆಕ್ಸಿಡೆಂಟ್ ಆಗುತ್ತೆ ಅಂತ ಮಾಜಿ ಸಚಿವ ಎಚ್ಚರಿಕೆ
ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (B.Sriramulu) ಗಂಭೀರ ಆರೋಪ ಮಾಡಿದ್ದಾರೆ.
ಗಲಾಟೆ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ನಿನ್ನೆ ಆದಂತಹ ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಾಗಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಅನ್ನೋ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಭವಿಷ್ಯ ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ. ಫೈರಿಂಗ್ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ಈಗಾಗಲೇ ಆಗಿರುವ ಪ್ರತಿಯೊಂದೂ ಮಾಹಿತಿಯನ್ನೂ ಹೇಳಿದ್ದೇನೆ. ನಾನು ರಾಜಕಾರಣದಲ್ಲಿ ಸಾಕಷ್ಟು ನೋಡಿದ್ದೇನೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಮೃತ ಕಾಂಗ್ರೆಸ್ ಕಾರ್ಯಕರ್ತನ ದೇಹ ಹೊಕ್ಕಿರೋದು ಪೊಲೀಸ್ ಬುಲೆಟ್ ಅಲ್ಲ: ಎಸ್ಪಿ ಸ್ಪಷ್ಟನೆ
ಬ್ಯಾನರ್ ಕಟ್ಟೋದು ಬೇಡ ಅಂತಾ ಹೇಳಿಲ್ಲ. ಕಾರು ಹೋಗೋದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕೀ ಜಗಳ ಆಯ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅದನ್ನ ಅವರೂ ತೋರಿಸಿದ್ರು. ಅಷ್ಟರೊಳಗೆ ಪೊಲೀಸರು ಬಂದು, ಚದುರಿಸಿದ್ರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳು ಜಾಸ್ತಿ ಆದ್ವು. ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿಗಾರ್ಡ್ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದ್ರು. ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೇ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮಾಡೋದಕ್ಕೆ ಅವಕಾಶ ಯಾರು ಕೊಟ್ರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗ್ತಿದೆ ಎಂದು ತಿಳಿಸಿದರು.
ಮಳೆ ಸುರಿಸಿದಂತೆ ಕಲ್ಲು ಸುರಿಸಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಗಾಯಗೊಂಡಿದ್ದಾರೆ. ಈಗಾಗಲೇ ನಮ್ಮವರನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಅವರು ಕಲ್ಲು ತೂರಾಟ ಮಾಡಿದಾಗ, ನಮ್ಮವರೂ ಕಲ್ಲು ತೂರಿದ್ದಾರೆ. ಅವರ ಗನ್ಮ್ಯಾನ್ಗಳೇ ಗುಂಡು ಹಾರಿಸಿದ್ದಾರೆ. ಸತೀಶ್ ರೆಡ್ಡಿ ಹಾಲಿ, ಮಾಜಿ ಶಾಸಕನೂ ಅಲ್ಲ. ಬಿಹಾರ್ ಮಾದರಿಯಲ್ಲಿ ಸತೀಶ್ ರೆಡ್ಡಿ ಗನ್ ಇಟ್ಕೊಂಡಿದ್ದಾನೆ. ಎಷ್ಟು ದೌರ್ಜನ್ಯ ಇವರದ್ದು? ಆ ರೀತಿ ಫೈರ್ ಮಾಡುತ್ತಾ ಹೋದ್ರೆ ಏನ್ ಮಾಡೋದಕ್ಕೆ ಆಗ್ತದೆ? ಹಾಗಾಗಿ ಕಾರ್ಯಕರ್ತರೆಲ್ಲರೂ ಒಂದೆಡೆ ಸೇರಿದ್ದಾರೆ. ಆದ್ರೂ ನಾವು ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಹೇಳಿದ್ದೇವೆ. ಸತ್ಯವನ್ನೂ ಯಾರೂ ಮುಚ್ಚಡಲು ಆಗಲ್ಲ. ಕೆಟ್ಟ ಕೆಲಸ ಮಾಡಿದ ದಿನ ರಾಜಕಾರಣದಲ್ಲಿ ಇರೋದಿಲ್ಲ. ಶಾಂತಿಯಾದ ಊರಲ್ಲಿ ಈ ರೀತಿ ದೌರ್ಜನ್ಯ ಮಾಡಿ, ಫೈರಿಂಗ್ ಮಾಡೋದು ಅಂದ್ರೆ ಏನು? ಇದು ಪೋಲಿಸರಿಂದ ಆಗಿರೋ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಯಿಂದ ಆಗಿರೋದು. ನಮ್ಮ ತಾಯಿ-ತಂದೆ ಅದನ್ನ ಕಲಿಸಿಲ್ಲ. ಧರ್ಮದ ಪರವಾಗಿ ನಾವಿರುವವರು. ಯಾರ ಗನ್ನಿಂದ ಯಾರು ಹಾರಿಸಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ನಮ್ಮ ಗನ್ಮ್ಯಾನ್ ಬಳಿಯ ಬುಲೆಟ್ಗಳನ್ನೂ ಲೆಕ್ಕ ಮಾಡಲಿ. ಕೂಡಲೇ ಎಫ್ಎಸ್ಎಲ್ ಕೊಡ್ರಿ ಎಂದು ಮನವಿ ಮಾಡಿದರು.
ನಾನು ಮನಸ್ಸು ಮಾಡಿದ್ರೆ ಬಳ್ಳಾರಿ ಭಸ್ಮ ಮಾಡ್ತೇನೆ ಅಂತಾ ಭರತ್ ರೆಡ್ಡಿ ಹೇಳಿದ್ದಾರೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅವರ ಮನೆ ಸುಡ್ತಿದ್ದೆ ಅಂತ ಭರತ್ ರೆಡ್ಡಿ ಅಂದಿದ್ದಾರೆ. ಅದಕ್ಕಾಗಿ ಅವರು ಎಲ್ಲವನ್ನೂ ತಂದಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಸುಡ್ತಿದ್ದೆ, ಬಳ್ಳಾರಿಯನ್ನ ಭಸ್ಮ ಮಾಡ್ತೇನೆ ಅನ್ನೋದನ್ನ ಕೇಳಿದ್ರೆ ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂದು ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಬ್ಯಾನರ್ ಗಲಾಟೆ – ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಜನರ ವಿರುದ್ಧ FIR
ಈ ಘಟನೆಯಲ್ಲಿ ವಾಲ್ಮೀಕಿ ಮಹರ್ಷಿಗಳನ್ನ ತರೋದು ಬೇಡ. ಒಂದು ಜಾತಿಯನ್ನ ಇದರಲ್ಲಿ ಯಾಕ್ ತರ್ತೀರಿ? ಮೂರ್ತಿ ಪ್ರತಿಷ್ಟಾಪನೆಗೆ ಯಾರೂ ಬೇಡ ಅನ್ನಲ್ಲ. ನಿಮ್ಮ ಸ್ವಾರ್ಥಕ್ಕಾಗಿ ವಿರೋಧ ಮಾಡ್ತಾರೆ ಅನ್ನೋದು ಸರಿಯಲ್ಲ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ರಾಜಕೀಯ ಶಾಶ್ವತ ಅಲ್ಲ. ಅವರ ಕಲ್ಚರ್ ಏನೇ ಇರಲಿ, ಏನೇ ಭಾಷೆ ಬಳಸಲಿ. ಶಾಂತಿಗೆ ನಾವು ಗೌರವ ಕೊಟ್ಕೊಂಡು ಬಂದಿದ್ದೇವೆ. ಅಮಾಯಕನ ಸಾವಾಯ್ತು ಯಾರು ಜವಾಬ್ದಾರರು? ಜನಾರ್ದನ ರೆಡ್ಡಿ ಮನೆ ಎಲ್ಲಿ? ಭರತ್ ರೆಡ್ಡಿ ಎಲ್ಲಿ, ಅಲ್ಲಿಂದ ಇಲ್ಲಿಗೆ ಯಾಕೆ ಬಂದ್ರಿ? ಪುತ್ಥಳಿ ಅನಾವರ ಮಾಡಿ. ಆದ್ರೆ ಅದನ್ನ ಯಾಕೆ ಅಡ್ಡ ತರ್ತೀರಿ? ಕಲ್ಲು ತೂರಾಟ ಮಾಡ್ತೀರಿ. 2 ಸಾವಿರಕ್ಕೂ ಹೆಚ್ಚು ಜನ ಬಂದಿದ್ದಾರೆ. ಬಿಯರ್ ಬಾಟಲಿ ತಂದಿದ್ದಾರೆ. ಸಂಸ್ಕಾರ ಇಲ್ಲದ ವ್ಯಕ್ತಿ ಎಲ್ಲಿ ಇದ್ರೇನು? ಎಲ್ಲಿ ಓದಿದ್ರೆ ಏನು? ಪ್ರಯೋಜನ ಇಲ್ಲ. ಶಕ್ತಿ ಪ್ರದರ್ಶನ ಚುನಾವಣೆಯಲ್ಲಿ ಮಾತ್ರ ಇರಲಿ ಎಂದು ಗುಡುಗಿದರು.
ಕೂಡಲೇ ಘಟನೆಯ ತನಿಖೆ ಮಾಡಲಿ. ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ಅವರಿಂದ ತನಿಖೆ ಮಾಡ್ಸಿ. ನಾವು ಎಲ್ಲೂ ಓಡಿ ಹೋಗಲ್ಲ. ನಿರೀಕ್ಷಣಾ ಜಾಮೀನು ಅದೆಲ್ಲಾ ತಗೋಳಲ್ಲ. ಪೊಲೀಸರು ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಸಿಟ್ಟಿಂಗ್ ಜಡ್ಜ್ ಅವರಿಂದ ಆಗದೇ ಇದ್ರೆ ಸಿಬಿಐ ತನಿಖೆ ಆಗಲಿ. ನೀವು ಜಗಳ ಮಾಡಬೇಕು ಅನ್ಕೊಂಡ್ರೆ ನಾವೇನ್ ಮಾಡೋದಕ್ಕೆ ಆಗ್ತದೆ. ಗೆದ್ದಾಗಿನಿಂದಲೂ ಜನಾರ್ದನ ರೆಡ್ಡಿ ಅವರಿಗೆ ತೊಂದ್ರೆ ಕೊಡ್ತಿದ್ದೀರಿ. ಎಷ್ಟು ದಿನಗಳ ಕಾಲ ಅಂತಾ ಕೈ ಕಟ್ಟಿ ಕೂರೋದಕ್ಕೆ ಆಗುತ್ತೆ? ನಮ್ಮ ಪಾರ್ಟಿಯ ಶಾಸಕರು ಅವರು. ಅವರ ಪರವಾಗಿ ನಾವು ನಿಂತಿದ್ದೇವೆ. ಇದಕ್ಕೆ ಏನೋ ಒಂದು ಬಣ್ಣ ಹಚ್ಚಲು ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.
ಭರತ್ ರೆಡ್ಡಿಗೆ ನಾನು ಮನವಿ ಮಾಡೋದು ಒಂದೇ. ನಿಮಗೆ ಉಜ್ವಲ ಭವಿಷ್ಯ ಇದೆ. ಇನ್ನೂ ವಯಸ್ಸು ಸಣ್ಣದಿದೆ. ಈ ಸ್ಪೀಡ್ ಇಳ್ಳೆಯದಲ್ಲ, ಆಕ್ಸಿಡೆಂಟ್ ಆಗುತ್ತೆ ಎಂದು ರಾಮುಲು ಎಚ್ಚರಿಸಿದ್ದಾರೆ. ಅಲ್ಲದೇ, ಪಕ್ಷ ಹಾಗೂ ಜನಾರ್ದನ ರೆಡ್ಡಿ ಪರವಾಗಿ ಟೊಂಕಕಟ್ಟಿ ನಿಲ್ತೇವೆ. ನಮ್ಮ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡ್ತೇವೆ ಎಂದಿದ್ರಂತೆ. ಬನ್ನಿ ಯಾರು ಬೇಡ ಅಂತಾರೆ. ನೀವೇ ಗುಂಡು ಹಾರಿಸಿದ್ದೀರಿ. ಇದರಲ್ಲಿ ನಮ್ಮದೇನಿದೆ. ಈ ರೀತಿಯ ಗುಂಡಾಗಿರಿ ದೌರ್ಜನ್ಯ ಬಹಳ ದಿನ ನಡೆಯಲ್ಲ. ಇದಕ್ಕೆ ನಾವೇನೂ ಭಯ ಬೀಳಲ್ಲ. ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ನೀವು ಯಾವಾಗ ಹೇಳ್ತೀರಿ ಆಗ ನಾನೇ ಅಲ್ಲಿಗೆ ಬರ್ತೀನಿ. ಜನಾರ್ದ ನರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಇಬ್ಬರನ್ನೂ ಕರೆದುಕೊಂಡು ಬರ್ತೀನಿ. ಕಾನೂನು ಸಲಹೆಗಾರರ ಜೊತೆ ಈಗಾಗಲೇ ಮಾತಾಡಿದ್ದೇವೆ. ಜನಾರ್ದನ ರೆಡ್ಡಿ ಅವರಿಗೆ ನಾನೇ ರಿಕ್ವೆಸ್ಟ್ ಮಾಡಿದ್ದೇನೆ. ನಿಮ್ಮ ಮನೆ ಬಳಿ ಬಂದು ಗೂಂಡಾಗಿರಿ ಮಾಡಿದ್ದಾರೆ. ಬ್ಯಾನರ್ ಕಟ್ಟೋ ಹೆಸರಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರೂ ಕೇಸ್ ಫೈಲ್ ಮಾಡೋದಾಗಿ ಹೇಳಿದ್ದಾರೆ. ನಮ್ಮ ಕಡೆಯಿಂದ ಒಂದು ಸಣ್ಣ ತಪ್ಪೂ ನಡೆದಿಲ್ಲ. ಆ ಪ್ಲಾನ್ ಫೇಲಾದಾಗ ನಮ್ಮ ತಲೆಗೆ ಕಟ್ಟೋ ಕೆಲಸ ಮಾಡ್ತಿದ್ದಾರೆ. ಆ ಬುಲೆಟ್ ತೆಗೆದು ಚೆಕ್ ಮಾಡಲಿ ತನಿಖೆ ಮಾಡಲಿ. ನಮ್ಮ ಕಡೆಯಿಂದ ತಪ್ಪಾಗಿದೆ ಅಂತಾ ಹೇಳಿದ್ರೆ ಏನ್ ಹೇಳಿದ್ರೂ ನಾನು ಕೇಳ್ತೇನೆ ಎಂದು ತಿಳಿಸಿದರು.



