ನವದೆಹಲಿ: ಸಾಧಾರಣವಾಗಿ ಸುಪ್ರೀಂ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸುವುದಿಲ್ಲ. ಆದರೆ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಪ್ರಕಟಿಸುವ ಮೂಲಕ ಮುಖ್ಯ ನ್ಯಾ. ರಂಜನ್ ಗೊಗೋಯ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಆಗಲಿರುವ ಹಿನ್ನೆಲೆಯಲ್ಲಿ ಈ ವಾರ ಅಥವಾ ಮುಂದಿನ ವಾರ ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಶನಿವಾರವೇ ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಗೊಗೋಯ್ ಅವರ ಕೊನೆಯ ಕೆಲಸದ ದಿನಾಂಕ ನ.16 ಶನಿವಾರ ಆಗಿದ್ದರಿಂದ ಈ ವಾರ ತೀರ್ಪು ಪ್ರಕಟವಾಗದ ಕಾರಣ ನವೆಂಬರ್ 14, 15 ರಂದು ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಇದನ್ನೂ ಓದಿ:ಸಂವಿಧಾನ ಪೀಠದಿಂದ ಅಯೋಧ್ಯೆ ತೀರ್ಪು – ಐವರು ನ್ಯಾಯಾಧೀಶರ ಕಿರು ಪರಿಚಯ ಓದಿ
ಅಯೋಧ್ಯೆ ವಿಚಾರ ಬಹಳ ಸೂಕ್ಷ್ಮವಾಗಿರುವ ಕಾರಣ ಸಂವಿಧಾನ ಪೀಠ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ತಂಡವನ್ನು ರಚಿಸಿತು. ಈ ತಂಡ ನಡೆಸಿದ ಸಂಧಾನ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಅಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್ 16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು.
ಇಂದು ತೀರ್ಪಿನ ದಿನಾಂಕ ಪ್ರಕಟಗೊಳ್ಳುವ ಮೊದಲೇ ರಂಜನ್ ಗೊಗೋಯ್ ಅವರು ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅನುಪ್ ಚಂದ್ರ ಪಾಂಡೆ ಮತ್ತು ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಿಂಗ್ ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ್ದರು. ಸುಪ್ರೀಂ ನ್ಯಾಯಮೂರ್ತಿಗಳೇ ಸರ್ಕಾರದ ಪ್ರತಿನಿಧಿಗಳ ಜೊತೆ ಕಾನೂನು ಬಗ್ಗೆ ಚರ್ಚೆ ನಡೆಸಿರುವುದು ಬಹಳ ಅಪರೂಪ.
ಸಾಧಾರಣವಾಗಿ ಒಂದು ದಿನ ಅಥವಾ ಎರಡು ದಿನದ ಮೊದಲು ತೀರ್ಪು ಪ್ರಕಟಗೊಳ್ಳುವ ದಿನಾಂಕವನ್ನು ಸುಪ್ರೀಂ ಕೋರ್ಟ್ ಪ್ರಕಟಿಸುತ್ತದೆ. ಆದರೆ ಈ ಪ್ರಕರಣದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ ನ್ಯಾಯಮೂರ್ತಿಗಳು ದಿನಾಂಕ ಪ್ರಕಟಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.
ಮೊದಲೇ ದಿನಾಂಕ ಪ್ರಕಟಿಸಿದರೆ ಸಮಾಜ ವಿರೋಧಿ ಜನರಿಗೆ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲದೇ ನ.10 ಭಾನುವಾರ ಸಾರ್ವಜನಿಕ ರಜೆಯಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ಯಾರಿಗೂ ಸಮಸ್ಯೆ ಆಗದೇ ಇರಲು ರಂಜನ್ ಗೊಗೋಯ್ ಅವರು ದಿಢೀರ್ ಆಗಿ ಶುಕ್ರವಾರ ರಾತ್ರಿ ತೀರ್ಪು ಪ್ರಕಟಿಸುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.