ಚಿಕ್ಕಮಗಳೂರು: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದೆಯೋ ಇಲ್ಲವೋ ಎಂದು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ (Chikkamagaluru) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಅಲ್ಲದೇ ಕುಡಿದು ವಾಹನ ಚಾಲನೆ ಮಾಡುವವರು, ರಸ್ತೆಗುಂಡಿಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ.
ಮೂಡಿಗೆರೆ (Mudigere) ತಾಲೂಕಿನ ನಿಡುವಾಳೆ ಗ್ರಾಮದ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಈ ಪ್ರಯೋಗ ಮಾಡಿದ್ದಾರೆ. ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ
ರಾಜ್ಯಾದ್ಯಂತ ರಸ್ತೆಗಳು ತೀವ್ರ ಗುಂಡಿ ಬಿದ್ದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಈ ವಿನೂತನ ಪ್ರಯೋಗಕ್ಕೆ ಇಬ್ಬರು ಮುಂದಾಗಿದ್ದಾರೆ. ಜೊತೆಗೆ ಹಳ್ಳಿಗಳ ಸೊಸೈಟಿಗೆ ತೆರಳಿದ್ದ ಯಮರಾಜ-ಚಿತ್ರಗುಪ್ತರು ಸೊಸೈಟಿಯಲ್ಲಿ ಅಕ್ಕಿಯನ್ನೂ ಚೆಕ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಕ್ಕಿ ಚೀಲದ ಆಳಕ್ಕೆ ಕೈಹಾಕಿ ಅಕ್ಕಿ ಗುಣಮಟ್ಟದ ಬಗ್ಗೆಯೂ ತಪಾಸಣೆ ನಡೆಸಿದ್ದಾರೆ.
ವಾಹನಗಳನ್ನ ಚಾಲನೆ ಮಾಡುವಾಗ ಮದ್ಯ ಕುಡಿದು ಚಾಲನೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಯುವಜನತೆ ಪ್ರಾಣ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಯಾರೂ ನನ್ನ ಬಳಿ ಬರಬೇಡಿ ಎಂದು ʻಯಮʼ ಎಚ್ಚರಿಕೆ ನೀಡಿದ್ದಾನೆ.
ಆಗ ನಿಡುವಾಳೆ ಗ್ರಾಮದ ಜನ ರಸ್ತೆ ತುಂಬಾ ಹಾಳಾಗಿದೆ. ನಾವು ಮದ್ಯಸೇವಿಸದೆ ವಾಹನ ಚಾಲನೆ ಮಾಡಿದರೂ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ದಾರೆ. ಕೆಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಯಮರಾಜನಿಗೆ ತಮ್ಮೂರಿನ ರಸ್ತೆ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್ ಬರಗಾಪಿಗೆ ಮನಸೋತ ಪ್ರವಾಸಿಗರು!