ಕಾರವಾರ: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅತೀ ವೇಗದಲ್ಲಿ ಬಂದ ಆಟೋ ಡಿಕ್ಕಿ ಹೊಡೆದು ಪರಾರಿಯಾದ್ರೆ, ದೂರು ಕೊಡಬೇಕಿದ್ದ ಅಪಘಾತಗೊಂಡ ವ್ಯಕ್ತಿಯೇ ಪ್ರಕರಣ ದಾಖಲಿಸಿಕೊಳ್ಳಲು ಬಂದ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ನಗರದ ಮಾರಿಕಾಂಬ ರಸ್ತೆಯ ಹೆಚ್.ಕೆ.ಹೆಚ್ ಮಂಡಿ ಬಳಿ ರಾಮನಬೈಲು ನಿವಾಸಿ ನಝೀರ್ ಅಹ್ಮದ್ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮಾರಿಕಾಂಬ ರಸ್ತೆಯ ಕಡೆಯಿಂದ ಅತೀ ವೇಗದಲ್ಲಿ ಬಂದ ಆಟೋ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಈತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣದಲ್ಲಿ ಆಗಮಿಸಿದ ಪೊಲೀಸರು ಪ್ರಾಥಮಿಕ ಮಾಹಿತಿ ಪಡೆದು ಪ್ರಕರಣ ದಾಖಲಿಸುವ ವೇಳೆ ಅಪಘಾತಗೊಂಡ ನಜೀರ್ ಅಹ್ಮದ್ ಪರಾರಿಯಾಗಿದ್ದಾನೆ.
ಅಪಘಾತವಾದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಖತ್ ವೈರಲ್ ಆಗಿದೆ. ಪೊಲೀಸರು ಕೂಡ ಕೇಸು ದಾಖಲಿಸಿಕೊಳ್ಳಲು ಅಪಘಾತಗೊಂಡ ನಝೀರ್ ಹಾಗೂ ಅಪಘಾತ ಮಾಡಿದ ಆಟೋಗಾಗಿ ಹುಡುಕಾಟ ನೆಡೆಸುತಿದ್ದಾರೆ.