ಮೈಸೂರು: ಗೋಪಾಲಪುರ ಗ್ರಾಮದಲ್ಲಿ ದರೋಡೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಕೇರಳದ ಆದರ್ಶ್ ಗುಂಡೇಟು ತಿಂದ ಆರೋಪಿ. ಸ್ಥಳ ಮಹಜರು ಸಮಯದಲ್ಲಿ ಬಿಯರ್ ಬಾಟಲಿಯಿಂದ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆದರ್ಶ್ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ಮುಸುಕುಧಾರಿಗಳ ತಂಡವೊಂದು ಗುಜ್ಜೇಗೌಡನ ಪುರ ಗ್ರಾಮದಲ್ಲಿ ಕೇರಳ (Kerala) ಉದ್ಯಮಿಯೊಬ್ಬರ ಕಾರು (Car) ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿತ್ತು. ಆರೋಪಿಗಳು ಗೋಪಾಲಪುರ ಗ್ರಾಮದಲ್ಲಿ ಒಂದು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಇದನ್ನೂ ಓದಿ: ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್
ಪ್ರಕರಣದ ಆರೋಪಿ ಆದರ್ಶ್ನನ್ನು ಸ್ಥಳ ಮಹಜರಿಗಾಗಿ ಶುಕ್ರವಾರ ರಾತ್ರಿ 9ಕ್ಕೆ ಗೋಪಾಲಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆರೋಪಿಯು ಜಯಪುರ ಠಾಣಾ ಪಿ.ಎಸ್.ಐ ಪ್ರಕಾಶ್ ಯತ್ತಿಮನಿ ಮತ್ತು ಪೊಲೀಸ್ ಸಿಬ್ಬಂದಿ ಹರೀಶ್ ಅವರಿಗೆ ಬಾಟಲಿಯಿಂದ ಚುಚ್ಚಿ, ಪರಾರಿಯಾಗಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ತಂಡದಲ್ಲಿದ್ದ ಬೈಲಕುಪ್ಪೆ ಠಾಣೆ ಪಿಎಸ್ಐ ಎಂ.ಕೆ.ದೀಪಕ್ ಫೈಯರಿಂಗ್ ನಡೆಸಿದ್ದಾರೆ. ಇಬ್ಬರು ಪೊಲೀಸರಿಗೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೇಟು ಬಿದ್ದ ಆರೋಪಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ 7 ಜನರನ್ನು ಬಂಧಿಸಲಾಗಿದೆ.