ವಿಧಾನಸಭೆಯಲ್ಲಿ ವರ್ಗಾವಣೆ ‘ವ್ಯಾಪಾರ’ದ ಕಿಚ್ಚು ; ಕಾಂಗ್ರೆಸ್-ಬಿಜೆಪಿ ಮಧ್ಯೆ ಜಟಾಪಟಿ, ಕಲಾಪ ಮುಂದೂಡಿಕೆ

Public TV
3 Min Read
Karnataka Session

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು (Assembly Session) ವರ್ಗಾವಣೆ ದಂಧೆ ಆರೋಪ ವಿಚಾರ ದೊಡ್ಡ ಸದ್ದು ಮಾಡ್ತು. ಯತ್ನಾಳ್ ಮಾಡಿದ ಆರೋಪ ಕಾಂಗ್ರೆಸ್-ಬಿಜೆಪಿ (Congress, BJP) ಮಧ್ಯೆ ಮಾತಿನ ಕಿಚ್ಚು ಹಚ್ಚಿತ್ತು. ಸದಸ್ಯರು ಪರಸ್ಪರ ಏರು ದನಿಯಲ್ಲಿ ವಾಗ್ವಾದಕ್ಕಿಳಿದು ಕಲಾಪದಲ್ಲಿ ಕೋಲಾಹಲ ಎಬ್ಬಿಸಿದ್ದರು.

ವಿಧಾನಸಭೆಯಲ್ಲಿಂದು ಮಾಜಿ ಸಿಎಂ HDK ಗೈರಾಗಿದ್ದರು. ಆದ್ರೂ ವರ್ಗಾವಣೆ ಫೈಟ್ ಜೋರಾಗಿಯೇ ಕಾವೇರಿತ್ತು. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹತ್ತಿಸಿದ ವರ್ಗಾವಣೆ ಕಿಡಿಗೆ ಕೆಲ ಗಂಟೆಗಳ ಕಲಾಪ ಉಭಯ ಪಕ್ಷಗಳ ಸದಸ್ಯರ ಜಟಾಪಟಿಗೆ ಬಲಿಯಾಯ್ತು. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಅನರ್ಹ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಶೂನ್ಯವೇಳೆಯಲ್ಲಿ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ವಿರುದ್ಧ ಯತ್ನಾಳ್ ವರ್ಗಾವಣೆ ವ್ಯಾಪಾರ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದರಿಂದ ಸದನದಲ್ಲಿ ಪರಸ್ಪರ ಮಾತಿನ ಬೆಂಕಿ ಹಚ್ಚಿಕೊಳ್ತು.

Karnataka Session 2

ವಿಜಯಪುರ ಪಾಲಿಕೆಗೆ ಅರ್ಹತೆಯಿಲ್ಲದ, ಐಎಎಸ್, ಕೆಎಎಸ್ ಕೇಡರ್ ಇಲ್ಲದ ಅಧಿಕಾರಿಯನ್ನ ವರ್ಗಾಯಿಸಲಾಗಿದೆ. ಆ ಮೂಲಕ ಹೈಕೋರ್ಟ್, ಕೆಎಟಿ, ಸರ್ಕಾರದ ನಿಯಮಗಳನ್ನ ಉಲ್ಲಂಘಿಸಲಾಗಿದೆ. ಆ ಅಧಿಕಾರಿ ಸೌಜನ್ಯಕ್ಕೂ ನನ್ನ ಬಂದು ಮಾತಾಡಿಸಿಲ್ಲ. ಈ ವರ್ಗಾವಣೆ ಮೂಲಕ ಸಚಿವರು ವ್ಯಾಪಾರ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ರು. ಯತ್ನಾಳ್ ಆರೋಪಕ್ಕೆ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಗಿ ಸದಸ್ಯರು ಪರಸ್ಪರ ಮಾತಿನ ಸಮರ ನಡೆಸಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅದೇನು ಮೆಕ್ಕಾ-ಮದೀನಾನಾ – ಮುತಾಲಿಕ್‌ ಪ್ರಶ್ನೆ

ಅಷ್ಟೇ ಅಲ್ಲ ಯತ್ನಾಳ್ ಮಾತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಹ ಕಿಡಿಕಾರಿದ್ರು. ಯತ್ನಾಳ್ ನೀವು ಹಿರಿಯರು, ವರ್ಗಾವಣೆ ಬಗ್ಗೆ ಮಾತ್ರ ಮಾತಾಡಿ, ಅದು ಬಿಟ್ಟು ವ್ಯಾಪಾರ ಅಂತೆಲ್ಲ ಏನ್ರಿ ಮಾತಾಡೋದು ಅಂತ ಸಿದ್ದರಾಮಯ್ಯ ಗರಂ ಆಗಿ ಗದರಿದರು. ಇನ್ನು ಡಿಕೆಶಿ ಸಹ, ಯತ್ನಾಳ್ ನೀವು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 1,000 ಕೋಟಿ ರೂ. ಅಂತೆಲ್ಲಾ ಆರೋಪ ಮಾಡಿದ್ರಿ. ಮಾತಿನ ಮೇಲೆ ಹಿಡಿತವಿರಲಿ, ನಮ್ಮ ಪಕ್ಷದಲ್ಲಿ ಇದ್ದಿದ್ದರೆ, ನಿಮ್ಮನ್ನ 24 ಗಂಟೆಯಲ್ಲಿ ವಜಾ ಮಾಡ್ತಿದ್ದೆ ಅಂತ ಕಿಡಿಕಾರಿದ್ರು. ಈ ವೇಳೆ ಯತ್ನಾಳ್ ಪರ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡ್ರು. ಉಭಯ ಪಕ್ಷಗಳ ಸದಸ್ಯರ ನಡುವೆ ಭಾರೀ ಜಟಾಪಟಿ ನಡೀತು. ಬೈರತಿ ಸುರೇಶ್ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ರು. ಸ್ಪೀಕರ್ ಅನಿವಾರ್ಯವಾಗಿ ಸದನವನ್ನ ಹತ್ತು ನಿಮಿಷ ಕಾಲ ಮುಂದೂಡಿದರು. ಬಳಿಕ ಸ್ಪೀಕರ್‌ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು. ಇದನ್ನೂ ಓದಿ: ರಾಜ್ಯದಲ್ಲಿ ಡಿಸಿ, ಸಿಇಓ, ಕಮಿಷನರ್‌ಗಳಿಗೆ ರೇಟ್ ಫಿಕ್ಸ್ ಆಗಿದೆ: ಕಟೀಲ್ ಗಂಭೀರ ಆರೋಪ

ಬಹಳ ಹೊತ್ತು ಸಂಧಾನ ಸಭೆ ನಡೆಸಿ ಮತ್ತೆ ಕಲಾಪ ಆರಂಭವಾದಾಗ ಮತ್ತೆ ಜಟಾಪಟಿ ನಡೀತು.‌ ಈ ವೇಳೆ ಸಿದ್ದರಾಮಯ್ಯ ಸಲಹೆ ಮೇರೆಗೆ ಉಭಯ ಕಡೆಯಿಂದಲೂ ವಿಷಾದ ವ್ಯಕ್ತಪಡಿಸಿ ಗದ್ದಲಕ್ಕೆ ಬ್ರೇಕ್ ಹಾಕಲಾಯ್ತು. ಅಧಿಕಾರಿ ವರ್ಗ ಬಗ್ಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ ವಾಪಸ್ ಪಡೆಯೋದಾಗಿಯೂ ಸರಿ ಇದ್ದರೆ ಅದೇ ಅಧಿಕಾರಿ ಮುಂದುವರೆಸೋದಾಗಿಯೂ ಉತ್ತರಿಸಿದರು.‌ ಅಲ್ಲಿಗೆ ಯತ್ನಾಳ್ ಹಚ್ಚಿದ್ದ ವರ್ಗಾವಣೆ ಕಿಡಿಯೂ ತಣ್ಣಗಾಯ್ತು.

Web Stories

Share This Article