ನವದೆಹಲಿ: ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ಸದಸ್ಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಬಾಂಗ್ಲಾದೇಶದ ಓರ್ವ ಉಗ್ರ ಸೇರಿದಂತೆ 8 ಭಯೋತ್ಪಾದಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಕೇರಳದಿಂದ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಬಂಧಿಸಿದ ಎಂಟು ಭಯೋತ್ಪಾದಕರಲ್ಲಿ ಅಲ್-ಖೈದಾ ಅಂಗಸಂಸ್ಥೆಯ ಸದಸ್ಯನಾಗಿರುವ ಬಾಂಗ್ಲಾದೇಶದ ಭಯೋತ್ಪಾದಕನೂ ಸೇರಿದ್ದಾನೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್ – ಐವರು ಉಗ್ರರು ಬಲಿ, ಇಬ್ಬರು ಸೈನಿಕರಿಗೆ ಗಾಯ
ಬಾಂಗ್ಲಾದೇಶದ ಸದ್ ರಾಡಿ ಅಕಾ ಶಾಬ್ ಸೇಖ್ (32) ಕೇರಳಕ್ಕೆ ತೆರಳುವ ಮೊದಲು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಲು ನವೆಂಬರ್ನಲ್ಲಿ ಭಾರತಕ್ಕೆ ಬಂದಿದ್ದ ಎಂದು ಎಸ್ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಎಸ್ಟಿಎಫ್ ಅವರು ಕೇರಳ ಮತ್ತು ಬಂಗಾಳದಲ್ಲಿ ಪೊಲೀಸರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ ಖೈದಾ-ಅಂಗಸಂಸ್ಥೆಯ ಸಹಾಯಕ ಫರ್ಹಾನ್ ಇಸ್ರಾಕ್ ಅಡಿಯಲ್ಲಿ ಭಯೋತ್ಪಾದಕರ ಗುಂಪು ಕೆಲಸ ಮಾಡುತ್ತಿದೆ ಎಂಬ ಗುಪ್ತಚರ ವರದಿಗಳನ್ನು ಆಧರಿಸಿ ಭಾರತದಾದ್ಯಂತ ‘ಆಪರೇಷನ್ ಪ್ರಘಾತ್’ ನಡೆಸಿದ್ದರು. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಇತರ ಹಿಂದೂಗಳನ್ನು ಗುರಿಯಾಗಿಸಲು ಭಾರತದಲ್ಲಿ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಲು ಬಾಂಗ್ಲಾದೇಶದ ನಾಯಕ ಪ್ರಯತ್ನಿಸಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಇದನ್ನೂ ಓದಿ: Mumbai Boat Accident | ಸ್ಪೀಡ್ ಬೋಟ್ ಫೆರ್ರಿಗೆ ಡಿಕ್ಕಿ ಹೊಡೆಯಲು ಕಾರಣ ಏನು? ದುರಂತ ಹೇಗಾಯ್ತು?
ಇದು ಜಿಹಾದಿಗಳ ವಿರುದ್ಧದ ಪ್ರಮುಖ ಕ್ರಮವಾಗಿದೆ. ಕೇಂದ್ರೀಯ ಏಜೆನ್ಸಿಗಳು, ಪಶ್ಚಿಮ ಬಂಗಾಳ ಮತ್ತು ಕೇರಳ ಪೊಲೀಸರ ಸಹಾಯದಿಂದ ನಾವಿದನ್ನು ಚಿಗುರುವುದಕ್ಕೂ ಮುಂಚೆಯೇ ಚಿವುಟಿ ಹಾಕಬೇಕು. ಆ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ್ದೇವೆಂದು ಅಸ್ಸಾಂನ ವಿಶೇಷ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಗಳಲ್ಲಿ ಎಸ್ಟಿಎಫ್, ಡಿ.17-18 ರ ಮಧ್ಯರಾತ್ರಿ ಎಂಟು ಶಂಕಿತರನ್ನು ಬಂಧಿಸಿತು.