ದಿಸ್ಪುರ್: ಭೀಕರ ಪ್ರವಾಹದಿಂದಾಗಿ ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳು ತತ್ತರಿಸಿ ಹೋಗಿವೆ. ಭೀಕರ ಪ್ರವಾಹ ಅಲ್ಲಿನ ನಿವಾಸಿಗಳನ್ನು ಮಾತ್ರವಲ್ಲದೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಪೊಲೀಸರನ್ನೂ ಬಲಿ ಪಡೆದಿದೆ.
ಭಾನುವಾರ ತಡರಾತ್ರಿ ಅಸ್ಸಾಂನ ನಾವಾಂಗ್ ಜಿಲ್ಲೆಯ ಕಂಪುರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಕಾನ್ಸ್ಟೆಬಲ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆ ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್ಡಿಆರ್ಎಫ್) ಸೋಮವಾರ ಬೆಳಗ್ಗೆ ಇಬ್ಬರು ಪೊಲೀಸರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?
ಪ್ರಭಾರ ಅಧಿಕಾರಿ ಸಮುತ್ಜಲ್ ಕಾಕತಿ ನೇತೃತ್ವದಲ್ಲಿ ಕಂಪುರ ಪೊಲೀಸ್ ಠಾಣೆಯ ಪೊಲೀಸರ ತಂಡ ಕಂಪುರದಲ್ಲಿ ಪ್ರವಾಹ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಕಾನ್ಸ್ಟೆಬಲ್ ರಾಜೀಬ್ ಬೊರ್ಡೊಲೆಒಯ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಲು ಸಮುತ್ಜಲ್ ಕಾಕತಿ ನೀರಿಗೆ ಧುಮುಕಿದ್ದು, ದುರದೃಷ್ಟವಶಾತ್ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: 16 ವರ್ಷದ ಬಳಿಕ 200 ಹೊಸ ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ
ಅಸ್ಸಾಂನಲ್ಲಿ ಪ್ರವಾಹದ ಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, 33 ಜಿಲ್ಲೆಗಳಲ್ಲಿ 42.26 ಲಕ್ಷ ಜನ ಕಷ್ಟ ಎದುರಿಸುತ್ತಿದ್ದಾರೆ. 5 ದಿನಗಳಲ್ಲಿ ಸಾವಿನ ಸಂಖ್ಯೆ 34ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 3 ಮಕ್ಕಳು ಸೇರಿದಂತೆ 9 ಜನ ಪ್ರಾಣ ಕಳೆದುಕೊಂಡಿದ್ದಾರೆ.