ಬೆಂಗಳೂರು: ನಿಮ್ಮ ಪಿಯೂಷ್ ಗೋಯಲ್ಗೆ ಸರಿಯಾಗಿ ಕೆಲಸ ಮಾಡೋಕೆ ಹೇಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದಾರೆ.
ಟ್ವೀಟ್ ಮೂಲಕ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಾಜಿ ಸಿಎಂ, ರೈಲು ತಡವಾಗಿ ಆಗಮಿಸಿದ್ದರಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯುವ ಅವಕಾಶ ತಪ್ಪುವ ಸಂಭವವಿದೆ. ಹೀಗಾಗಿ ಕರ್ನಾಟಕದಲ್ಲಿ ನೀಟ್ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತರರ ಸಾಧನೆಗಳಿಗೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತೀರಿ. ಆದರೆ ಈಗ ನಿಮ್ಮ ಕ್ಯಾಬಿನೆಟ್ ಸಚಿವರ ತಪ್ಪಿನ ಹೊಣೆಯನ್ನು ನೀವೇ ಹೊರಬೇಕು. ರೈಲು ಸೇವೆ ವಿಳಂಬದಿಂದಾಗಿ ಅನೇಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಛಾಟಿ ಬೀಸಿದ್ದಾರೆ.
ಬಳ್ಳಾರಿ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಹಂಪಿ ಎಕ್ಸ್ಪ್ರೆಸ್ ರೈಲು ಹೊಸಪೇಟೆ-ಗುಂತಕಲ್ ಮಾರ್ಗವಾಗಿ ಇಂದು ಬೆಂಗಳೂರಿಗೆ ಬರುತ್ತಿದ್ದರು. ಆದರೆ ರೈಲು ಮಾರ್ಗ ಸಮಸ್ಯೆಯಿಂದಾಗಿ ಚಿಕ್ಕಮಗಳೂರಿನ ಬಳ್ಳೆಕೆರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಹೀಗಾಗಿ ರೈಲು ಬೆಂಗಳೂರಿಗೆ ತಲುಪಲು ಮಧ್ಯಾಹ್ನ 2 ಗಂಟೆ ಆಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
Mr. @narendramodi,
Ask @PiyushGoyal to work properly for next few days and then we will set it right. Also, ensure that the aggrieved students get another chance to write NEET exam.
2/2
— Siddaramaiah (@siddaramaiah) May 5, 2019
ನೀಟ್ ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಆದರೆ ನಾವು ಬೆಂಗಳೂರಿಗೆ ತಲುಪಿ ಪರೀಕ್ಷಾ ಕೇಂದ್ರಕ್ಕೆ ಹೋಗುವ ವೇಳೆಗೆ ಪರೀಕ್ಷೆ ಮುಗಿದಿರುತ್ತದೆ. ಹೀಗೆ ಆಗುತ್ತದೆ ಎಂದು ನಾವು ಊಹೆ ಕೂಡ ಮಾಡಿರಲಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.