ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಯನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಮರ್ಥನೆ ಮಾಡಿಕೊಂಡಿದ್ದಾರೆ. ಯತ್ನಾಳ್ ಯಾವುದೇ ಕಾನೂನು ಬಾಹಿರವಾಗಿ ಮಾತನಾಡಿಲ್ಲ. ಸಂವಿಧಾನದ ವಿರುದ್ಧವೂ ಮಾತನಾಡಿಲ್ಲ ಅನ್ನೋ ಮೂಲಕ ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.
ಯತ್ನಾಳ್ ಹೇಳಿಕೆ ಇಟ್ಟುಕೊಂಡು ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ಮಾಡಲು ಕಾಂಗ್ರೆಸ್ ಸಿದ್ಧತ ಮಾಡಿಕೊಂಡಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು. 60 ದಿನಗಳು ಸದನ ನಡೆಸುವ ಉದ್ದೇಶದಿಂದ ಈ ಬಾರಿ ಒಂದು ತಿಂಗಳು ಅಧಿವೇಶನ ನಡೆಸುತ್ತಿದ್ದೇವೆ. ಏನೇ ವಿಚಾರ ಇದ್ದರು ಸದನ ಒಳಗೆ ಚರ್ಚೆ ಆಗಬೇಕು. ಅದು ಬಿಟ್ಟು ಹೋರಾಟ ಮಾಡ್ತೀವಿ ಅನ್ನೋದು ಸರಿಯಲ್ಲ ಅಂತ ಕಾಂಗ್ರೆಸ್ ಗೆ ತಿರುಗೇಟು ಕೊಟ್ಟರು.
ಯತ್ನಾಳ್ ಸಂವಿಧಾನ ವಿರುದ್ಧ ಮಾತಾಡಿದ್ರೆ ಅದನ್ನು ಸದನದಲ್ಲಿ ಚರ್ಚೆ ಮಾಡಲಿ ಅದು ಬಿಟ್ಟು ಪ್ರತಿಭಟನೆ ಮಾಡಿ ಸಮಯ ಹಾಳು ಮಾಡೋದು ಬೇಡ ಅಂತ ಕಾಂಗ್ರೆಸ್ ಗೆ ತಿವಿದರು. ಯತ್ನಾಳ್ ಕಾನೂನು ವಿರುದ್ಧ ಮಾತಾಡಿಲ್ಲ. ಕಾಂಗ್ರೆಸ್ ಅವರು ಮಾತಾಡೋರ ಬಾಯಿ ಮುಚ್ಚಿಸೋ ಕೆಲಸಕ್ಕೆ ಕೈ ಹಾಕಬಾರದು ಅಂತ ಎಚ್ಚರಿಕೆ ನೀಡಿದರು.