ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ, ನೈಸ್ ರಸ್ತೆಯ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ಖೇಣಿ ಸೇರ್ಪಡೆ ಹಿನ್ನೆಲೆಯಲ್ಲಿ ನೈಸ್ ಅಕ್ರಮದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಗರಂ ಆಗಿ ಯಡಿಯೂರಪ್ಪನವರನ್ನು ಉದಾಹರಣೆ ನೀಡಿ ಉತ್ತರಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಮಾಡಿದ ಬಗ್ಗೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರನ್ನು ನೀವು ಯಾಕೆ ಕೇಳಲ್ಲ ಎಂದು ಪ್ರಶ್ನೆ ಮಾಡಿದರು. ಮೋದಿ ಮತ್ತು ಶಾ ವಿಷಯದಲ್ಲಿ ನೀವು ಏನು ಪ್ರಶ್ನೆ ಕೇಳದೇ ಮೌನವಾಗಿ ಇರುತ್ತೀರಿ ಎಂದು ಇಬ್ಬರು ನಾಯಕರು ಮಾಧ್ಯಮಗಳ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು.
ಡಿಕೆ ಶಿವಕುಮಾರ್ ಮಾತನಾಡಿ, ರಾಜಕೀಯ ಬೇರೆ. ಅವರ ವ್ಯವಹಾರ ಬೇರೆ. ರಾಜಕೀಯ ದೃಷ್ಟಿಯಲ್ಲಿ ಮಾತ್ರ ಖೇಣಿ ಅವರು ಕಾಂಗ್ರೆಸ್ ಸೇರಲು ಬಯಸಿರುವುದನ್ನು ಸ್ವಾಗತಿಸುತ್ತೇವೆ. ಅವರ ವೈಯಕ್ತಿಕ ವಿಚಾರಗಳು ಯಾವುವು ಪಕ್ಷಕ್ಕೆ ಸಂಬಂಧವಿಲ್ಲ. ಅಶೋಕ್ ಖೇಣಿ ಶಾಸಕರಾಗುವ ಮೊದಲೇ ನೈಸ್ ರಸ್ತೆ ಆರಂಭಗೊಂಡಿದೆ ಎಂದು ಹೇಳಿದರು. ಇದನ್ನು ಓದಿ: `ಕೈ’ ಹಿಡಿದ ಖೇಣಿ – ಕಾಂಗ್ರೆಸ್ಸಿಗೆ ಖೆಡ್ಡಾ ತೋಡಲು ದಾಳ ಉರುಳಿಸಿದ ದೇವೇಗೌಡ!
ನೈಸ್ ನಲ್ಲಿ ಅಕ್ರಮಗಳು ನಡೆದಿದ್ದರೆ ಅದನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ನೈಸ್ ಖೇಣಿ ಅವರ ಆಸ್ತಿಯಲ್ಲ. ನೈಸ್ ಕಂಪನಿಯಲ್ಲಿ ಅವರು ಒಬ್ಬ ಡೈರೆಕ್ಟರ್. ಇವತ್ತು ಅವರು ಇರುತ್ತಾರೆ. ನಾಳೆ ಇನ್ನೊಬ್ಬರು ನೈಸ್ ಕಂಪನಿಗೆ ಬರಬಹುದು ಎಂದು ಡಿಕೆಶಿ ಖೇಣಿ ಸೇರ್ಪಡೆಯನ್ನು ಸಮರ್ಥಿಸಿಕೊಂಡರು.