ತಮ್ಮದೇ ವಿಶಿಷ್ಟ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ಅಶೋಕ್ ಕಡಬ(Ashok Kadaba). ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ಅವರು ‘ಸತ್ಯಂ’ ಎಂಬ ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ `ನಿಂಬಿಯಾ ಬನಾದ ಮ್ಯಾಗ’ (Nimbiya Banada, Myaga) ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ವರನಟ ಡಾ.ರಾಜ್ ಕುಮಾರ್ (Raj Kumar) ಅವರ ಹಿರಿ ಮೊಮ್ಮಗ ಶಣ್ಮುಖ ಗೋವಿಂದರಾಜ್ (Shanmukh Govindaraj) ನಾಯನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶೀರ್ಷಿಕೆಯಲ್ಲಿಯೇ ಹೊಸತೇನನ್ನೋ ಬಚ್ಚಿಟ್ಟುಕೊಂಡಿರುವ ಚಿತ್ರ ನಿಂಬಿಯಾ ಬನಾದ ಮ್ಯಾಗ. ಇದರ ಫಸ್ಟ್ ಲುಕ್ (First Look) ಟೀಸರ್ ಇದೇ ತಿಂಗಳ 25ರಂದು, ವರಮಹಾಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಒಂದು ಲಾಂಚ್ ಆಗಿತ್ತು. ಅದಕ್ಕೂ ಒಂದಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಈ ಫಸ್ಟ್ ಲುಕ್ ಮೂಲಕ ಒಟ್ಟಾರೆ ಸಿನಿಮಾ ಒಂದಷ್ಟು ಸಾರ ಜಾಹೀರಾಗುವ ಸಾಧ್ಯತೆಗಳಿವೆ. ಹಾಗೆ ನೋಡಿದರೆ, ಡಾ. ರಾಜ್ ಕುಮಾರ್ ಕುಟುಂಬಸ್ಥರಿಗೆ ನಟನೆಯ ಕಲೆ ರಕ್ತಗತವಾಗಿಯೇ ಬಂದು ಬಿಟ್ಟಂತಿದೆ. ಈ ಮಾತಿಗೆ ತಕ್ಕುದಾಗಿ ಕಳೆದ ಒಂದಷ್ಟು ದಶಕಗಳಲ್ಲಿ ರಾಜ್ ಫ್ಯಾಮಿಲಿಯಿಂದ ಬಹಳಷ್ಟು ಕಲಾವಿದರು ಬಂದಿದ್ದರೆ. ಆ ಸಾಲಿಗೆ ಹೊಸಾ ಸೇರ್ಪಡೆ ಶಣ್ಮುಖ ಗೋವಿಂದರಾಜ್. ರಾಜ್ ಕುಮಾರ್ ಅವರ ಹಿರಿ ಮಗಳಾದ ಲಕ್ಷ್ಮಿಯವರ ಪುತ್ರ ಶಣ್ಮುಖ. ರಾಜ್ ಕುಟುಂಬಸ್ಥರು ಕಥೆಯನ್ನು ಅಳೆದೂ ತೂಗಿ ಒಪ್ಪಿಕೊಳ್ಳುವಲ್ಲಿಯೂ ನಿಷ್ಣಾತರು. ವಿಶೇಷವೆಂದರೆ, ಅಶೋಕ್ ಕಡಬ ಹೇಳಿದ ಕಥೆಯನ್ನು ಎಲ್ಲರೂ ಬಹುವಾಗಿ ಮೆಚ್ಚಿಕೊಂಡೇ ಒಪ್ಪಿಗೆ ಸೂಚಿಸಿದರಂತೆ.
ಶಣ್ಮುಖ ಕೂಡಾ ಈ ಕಥೆ ಮತ್ತು ಪಾತ್ರಕ್ಕನುಗುಣವಾಗಿ ಒಂದಷ್ಟು ತಯಾರಿ ನಡೆಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಈ ಸಿನಿಮಾ ಶೇಕಡಾ ನಲವತ್ತರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ತಾಯಿ ಮಗನ ಸುತ್ತಸುತ್ತುವ ಭಾವನಾತ್ಮಕ ಕಥಾ ಹಂದರ ಹೊಂದಿರುವ ಈ ಕಥೆ ಮಲೆನಾಡಿನಲ್ಲಿಯೇ ಜರುಗುತ್ತದೆ. ಇದನ್ನೂ ಓದಿ:ತಮಿಳಿನ ‘ಜಂಟಲ್ಮ್ಯಾನ್ 2’ನಲ್ಲಿ ಸುಧಾರಾಣಿ
ಈಗಾಗಲೇ ಎರಡು ಹಂತಗಳಲ್ಲಿ ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಕಿ ಉಳಿದಿರುವುದು ಮಲೆನಾಡಿನ ಭಾಗದ ಪ್ರಧಾನ ಭಾಗದ ಚಿತ್ರೀಕರಣವಷ್ಟೇ. ಸದ್ಯ ಅಶೋಕ್ ಕಡಬ ನಿರ್ದೇಶನ ಮಾಡಿರುವ ಬಿಗ್ ಬಜೆಟ್ ಚಿತ್ರವಾದ ಸತ್ಯಂ ಬಿಡುಗಡೆಯ ಸನಿಹದಲ್ಲಿದೆ. ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಅದರ ಕೆಲಸ ಕಾರ್ಯ ಮುಗಿದಾದ ಮೇಲೆ ಮೂರನೇ ಹಂತದ ಚಿತ್ರೀಕರಣ ಶುರು ಮಾಡುವ ನಿರ್ಧಾರ ನಿರ್ದೇಶಕರದ್ದು. ಅಂದಹಾಗೆ ಆ ಭಾಗದ ಚಿತ್ರೀಕರಣ ಶೃಂಗೇರಿ, ಹೊರನಾಡು ಸುತ್ತಮುತ್ತ ನಡೆಯಲಿದೆ.
ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣದಲ್ಲಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಬಗೆಗಿನ ವಿವರ ಸದ್ಯದಲ್ಲಿಯೇ ಜಾಹೀರಾಗಲಿದೆ. ಎ2 ಮ್ಯೂಸಿಕ್ ಮೂಲಕ ಟೀಸರ್ ಲಾಂಚ್ ಆಗಲಿದೆ. ಅದಾದ ಬಳಿಕ ನಿಂಬಿಯಾ ಬನಾದ ಮ್ಯಾಗಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಕ್ಷಕರನ್ನು ತಲುಪಲಿವೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]