ಆಷಾಢ ಮಾಸದಲ್ಲಿ ಪೂಜೆ ಪುನಸ್ಕಾರ ಮಾಡಬಾರದು ಎಂದುಕೊಂಡಿರುತ್ತೇವೆ. ಆದರೆ, ಈ ಬಾರಿಯ ಆಷಾಢ ಮಾಸದಲ್ಲಿ ಗಜಕರಣದಲ್ಲಿ ಆಷಾಢ ಶುಕ್ರವಾರ ಪ್ರಾಪ್ತಿಯಾಗಿದ್ದು, ಈ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ದರಿದ್ರತನ, ಸಾಲಭಾದೆ ಹಾಗೂ ಇತರೆ ತೊಂದರೆಗಳು ನಿವಾರಣೆಯಾಗಲಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಆಷಾಢ ಮಾಸದಲ್ಲಿ ನಾವು ಯಾವುದೇ ಪೂಜೆ, ಪುನಸ್ಕಾರಗಳನ್ನು ಮಾಡಬಾರದು ಎಂದು ಅಂದುಕೊಂಡಿರುತ್ತೇವೆ. ಆದರೆ ಆಷಾಢ ಮಾಸದಲ್ಲಿ ಆಡಿ ಶುಕ್ರವಾರ, ಕನ್ನಡದಲ್ಲಿ ಆಷಾಢ ಶುಕ್ರವಾರ ಎಂದು ಹೇಳುತ್ತೇವೆ. ಈ ಆಷಾಢ ಶುಕ್ರವಾರ 5ನೇ ತಾರೀಖಿನಂದು ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಲಕ್ಷ್ಮಿ ಆರಾಧನೆ ಮಾಡಿದರೆ ತೊಂದರೆ ತಾಪತ್ರಯಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಈ ಬಾರಿಯ ಆಷಾಢದ ವಿಶೇಷವೆಂದರೆ, ಗಜಕರಣದಲ್ಲಿ ಆಷಾಢ ಶುಕ್ರವಾರ ಪ್ರಾಪ್ತಿಯಾಗುತ್ತಿದೆ. ಗಜಕರಣ ಅತೀ ಶ್ರೇಷ್ಠವಾಗಿದ್ದು, ಈ ಸಂದರ್ಭದಲ್ಲಿ ಎಲ್ಲ ದೇವಸ್ಥಾನಗಳ ಹೆಬ್ಬಾಗಿಲು ಅಥವಾ ಬಾಗಿಲಲ್ಲಿ ಗಜಲಕ್ಷ್ಮಿ ಪ್ರತಿಷ್ಠಾಪಿಸಿರುವುದನ್ನು ಕಾಣುತ್ತೇವೆ.
ದರಿದ್ರತನ, ತುಂಬಾ ಕಷ್ಟ ಪಡುತ್ತಿರುತ್ತಾರೆ, ಎಷ್ಟೇ ಕಷ್ಟ ಪಟ್ಟರೂ ಹಣ ಕೈಯ್ಯಲ್ಲಿ ನಿಲ್ಲುತ್ತಿರುವುದಿಲ್ಲ. ಸಾಲ ಮಾಡುವುದು, ಬಡ್ಡಿ ಕಟ್ಟುವುದು, ಸಾಲತೀರಿಸದೆ ಕೊರಗುವುದು, ಈ ಮೂಲಕ ರೋಗವನ್ನು ಆಹ್ವಾಹನೆ ಮಾಡಿಕೊಳ್ಳುತ್ತಾರೆ. ಇದೆಲ್ಲದಕ್ಕೆ ಆಡಿ ಶುಕ್ರವಾರದ ವ್ರತದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಆಡಿ ಶುಕ್ರವಾರದ ದಿನ ಪ್ರಾತಃ ಕಾಲದಲ್ಲಿ ಎದ್ದು, ಸ್ನಾನ ಮಾಡಿ, ವ್ಯವಸ್ಥಿತವಾಗಿ ಶ್ವೇತವಸ್ತ್ರ ಧರಿಸಿ, ಬ್ರಾಹ್ಮೀ ಲಗ್ನದಲ್ಲಿ ಅಂದರೆ, ಬೆಳಗ್ಗೆ 4.30ರಿಂದ 5.20 ಗಂಟೆಯೊಳಗೆ ಮನೆಯಲ್ಲಿ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕಲಶ ಸ್ಥಾಪನೆ ಮಾಡಬೇಕು. ಕಲಶ ಸ್ಥಾಪನೆ ಮಾಡಿ, ಪದ್ಮ ಪ್ರಿಯೆ, ಪದ್ಮಿನಿ, ಪದ್ಮ ಹಸ್ತೆ, ಪದ್ಮಾಲಯೆ, ಪದ್ಮದಲಾಯತಾಕ್ಷೆ, ವಿಶ್ವ ಪ್ರಿಯೆ, ವಿಶ್ವಮನೋನಕೂಲೆ, ತದ್ವಾದ ಪದ್ಮಂ ವಹಿ ಸನ್ನಿಧತ್ವ. ಎಂದು ಹೇಳಬೇಕು. ಈ ಮೂಲಕ ಪದ್ಮಾಸನ ಹಾಕಿ ಕುಳಿತಿರುವ ಮಹಾಲಕ್ಷ್ಮಿಯನ್ನು ಆಹ್ವಾನಿಸಬೇಕು. ಅಷ್ಟ ದಳವನ್ನಿಟ್ಟು ಅದರ ಮೇಲೆ ಶ್ರೀಚಕ್ರವನ್ನಿಟ್ಟು ಕಲಶ ಸ್ಥಾಪನೆ ಮಾಡಿ, ವ್ಯವಸ್ಥಿತವಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು.
ಪ್ರಾಣ ಪ್ರತಿಷ್ಠಾಪನೆ ಮಾಡಬೇಕಾದರೆ, ಪೂಜೆ, ವ್ರತ, ಹೋಮ, ಹವನಗಳನ್ನು ಮಾಡುವ ಸಮಯದಲ್ಲಿ ವೇದಗಳನ್ನು ಹೇಳುವಂತೆ ಲಕ್ಷ್ಮೀ ಪೂಜೆ ಸಂದರ್ಭದಲ್ಲಿಯೂ ಹೇಳಬೇಕು. ಹಗನ್ಯಾಸ, ಕರನ್ಯಾಸ ಪ್ರಾಣ ಪ್ರತಿಷ್ಠಾಪನೆಗಳನ್ನು ಶೋಡಶ ಉಪಚಾರಗಳ ಮೂಲಕ ವ್ಯವಸ್ಥಿತವಾಗಿ ಭಕ್ತಿಯಿಂದ ಪ್ರಾರ್ಥನೆ ಮಾಡಿ, ಪ್ರಾಣ ಪ್ರತಿಷ್ಠಾಪನೆ ಮಾಡಬೇಕು.
ಹೆಸರುಬೇಳೆ ಕೋಸಂಬರಿ ಅಥವಾ ಸಜ್ಜಿಗೆಯನ್ನು ಮಾಡಿ ನೈವೇದ್ಯ ಮಾಡಬೇಕು. ಶುಕ್ರವಾರ ಸಂಜೆ 8 ಜನ ಸುಮಂಗಲಿಯರನ್ನು ಕರೆದು ವ್ಯವಸ್ಥಿತವಾಗಿ ಅವರಿಗೆ ಅರಶಿಣ, ಕುಂಕುಮ ಕೊಡುವ ಕೆಲಸವನ್ನು ಮಾಡಿ. ಆಗ ಮಹಾಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ಉಲ್ಲೇಖಗಳಿವೆ.