ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡಿ, ಇನ್ನೇನು ಫಿನಾಲೆ ವೇದಿಕೆಯ ಮೇಲೆ ಆರ್ಯವರ್ಧನ್ ಗುರೂಜಿ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಿರುವಾಗಲೇ ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ರಾತ್ರೋರಾತ್ರಿ ಮನೆಗೆ ಬಂದರು. ಎಲ್ಲರೊಂದಿಗೆ ಬೆರೆತು, ಚೆನ್ನಾಗಿಯೇ ಆಟವಾಡಿ, ಮನರಂಜನೆ ಕೊಟ್ಟು, ಮೆಚ್ಚುಗೆಗೆ ಪಾತ್ರರಾದರೂ, ತಮಗೆ ಮಾತ್ರ ಯಾಕೆ ಈ ಎಲಿಮಿನೇಟ್ ಶಿಕ್ಷೆ ಎಂದು ಬಹಿರಂಗವಾಗಿಯೇ ಅವರು ಕೇಳಿದ್ದಾರೆ. ಜೊತೆಗೆ ದಿವ್ಯಾ ಉರುಡುಗ ಮೇಲೆ ಸಾಕಷ್ಟು ಅನುಮಾನ ವ್ಯಕ್ತ ಪಡಿಸಿದ್ದಾರೆ.
ದಿವ್ಯಾ ಉರುಡುಗ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡಿರುವ ಗುರೂಜಿ, ಆ ಹುಡುಗಿಗಿಂತಲೂ ನಾನು ಚೆನ್ನಾಗಿ ಆಡಿದ್ದೇನೆ. ಕಿಚ್ಚನಿಂದ ಚಪ್ಪಾಳೆ, ಮೆಚ್ಚುಗೆ ತಗೆದುಕೊಂಡಿದ್ದಾರೆ. ದಿವ್ಯಾಗೆ ಯಾವತ್ತೂ ಚೆಪ್ಪಾಳೆ ಸಿಕ್ಕಿಲ್ಲ. ಆದರೂ, ಅವರು ಫಿನಾಲೆಗೆ ಹೋದರು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆಯೂ ಇಂಥದ್ದೊಂದು ಅಸಮಾಧಾನವನ್ನು ಸುದೀಪ್ ಮುಂದೆಯೇ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್
ಆರ್ಯವರ್ಧನ್ ಗುರೂಜಿ ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಬಹುತೇಕರು ನಂಬಿದ್ದರು. ಹಾಗಾಗಿ ಹಲವು ವಾರಗಳ ಕಾಲ ಗುರೂಜಿಯನ್ನು ಅಭಿಮಾನಿಗಳು ಉಳಿಸಿಕೊಂಡೇ ಬಂದರು. ಹಲವು ಬಾರಿ ನಾಮಿನೇಟ್ ಆಗಿದ್ದರೂ, ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗುತ್ತಲೇ ಬಂದರು. ಹೀಗಾಗಿ ಈ ಸೀಸನ್ ನಲ್ಲಿ ಗುರೂಜಿ ಫಿನಾಲೆ ವೇದಿಕೆಯ ಮೇಲೆ ಮತ್ತಷ್ಟು ಮನರಂಜನೆ ನೀಡುತ್ತಾರೆ ಎಂದು ನಂಬಲಾಗಿತ್ತು. ಆದರೆ, ನಡುರಾತ್ರಿಯ ಎಲಿಮಿನೇಷನ್ ಅದಕ್ಕೆ ಅವಕಾಶ ಕೊಡಲಿಲ್ಲ.
ಇದರಿಂದಾಗಿ ಗುರೂಜಿ ಬೇರೆ ಸ್ಪರ್ಧಿಗಳ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡು, ನಾನು ಹಾಗೆ ಇದ್ದೆ, ಅವರು ಹೀಗಿದ್ದರು ಎಂದು ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುರೂಜಿಯ ಈ ನಡೆ ಸ್ವತಃ ದಿವ್ಯಾ ಅವರಿಗೆ ಬೇಸರ ತರಿಸಿದೆ. ಫಿನಾಲೆ ವೇದಿಕೆಯ ಮೇಲೆಯೇ ದಿವ್ಯಾ ಅವರು ಗುರೂಜಿಯ ಬಗ್ಗೆ ಬೇಸರದಿಂದಲೇ ಮಾತನಾಡಿದ್ದಾರೆ.