ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಕೆಲವು ಶಾಸಕರಿಗೆ ಲಂಚ ನೀಡಿ ಅವರನ್ನು ಆಪರೇಷನ್ ಕಮಲಕ್ಕೆ (Operation Lotus) ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಬಂಧಿಸುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಲು ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಕಾರ್ಯಗಳಲ್ಲಿ ಅಮಿತ್ ಶಾ ಭಾಗಿಯಾಗಿದ್ದಾರೆ. ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಶಾಸಕರ ಖರೀದಿಗೆ ಬಿಜೆಪಿ (BJP) ಪ್ರಯತ್ನ ಪಟ್ಟಿತ್ತು. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿಯ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹೆಗಲ ಮೇಲೆ ಮೇಕೆ ಹೊತ್ತ ರಾಹುಲ್ – ಫೋಟೋ ವೈರಲ್
ಬಿಜೆಪಿಗೆ ಸೇರಲು ಕೆಲವು ಟಿಆರ್ಎಸ್ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯ ಆಡಿಯೋದಲ್ಲಿ ಒಬ್ಬಾತ ʼಶಾಹ್ ಜಿʼ ಎಂದು ಹೇಳುತ್ತಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು ಈ ವೇಳೆ ಸತ್ಯ ಹೊರಬರಲಿದೆ ಎಂದು ತಿಳಿಸಿದ್ದಾರೆ.
ʼಶಾಹ್ ಜಿʼ ಎಂದು ಆಡಿಯೋದಲ್ಲಿ ಕರೆಯುತ್ತಿರುವುದು ಅಮಿತ್ ಶಾ ಬಗ್ಗೆ ಆಗಿದ್ದರೆ ಅಮಿತ್ ಶಾರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಯಾಕೆಂದರೆ ಒಬ್ಬ ದಲ್ಲಾಳಿ, ಶಾಸಕರೊಬ್ಬರನ್ನು ಖರೀದಿಸಲು ಹೋಗಿ ಸಿಕ್ಕಿಬಿದ್ದು, ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕೇಳಿ ಬಂದರೆ ಅದು ಇಡೀ ದೇಶಕ್ಕೆ ಅಪಾಯಕಾರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ
ಕೆಲದಿನಗಳ ಹಿಂದೆ ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ತೆಲಂಗಾಣದಲ್ಲಿ ಟಿಆರ್ಎಸ್ ಶಾಸಕರನ್ನು ಖರೀದಿಸಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಆಪರೇಷನ್ ಕಮಲಕ್ಕಾಗಿ 15 ಕೋಟಿ ರೂ. ತಂದ ಆರೋಪದ ಮೇಲೆ ಹಣದ ಸಮೇತ ನಾಲ್ವರನ್ನು ಹೈದರಾಬಾದ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.