ಭುವನೇಶ್ವರ: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಟಿ20 ಸರಣಿ ಇದೇ ಜೂನ್ 9 ರಿಂದ ಆರಂಭವಾಗುತ್ತಿದೆ. ಆದರೆ ಜೂನ್ 12ರಂದು ಕಟಕ್ನ ಬಾರಮತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯಗಳನ್ನು ರದ್ದುಗೊಳಿಸುವಂತೆ ಒಡಿಶಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಲಾಗಿದ್ದು, ತುರ್ತು ವಿಚಾರಣೆಗೆ ಕೋರಲಾಗಿದೆ.
ಮಾನವ ಹಕ್ಕುಗಳ ಹೋರಾಟಗಾರ ಸಂಜಯ್ ಕುಮಾರ್ ನಾಯಕ್ ಈ ಅರ್ಜಿ ಸಲ್ಲಿಸಿದ್ದು, ಒಡಿಶಾ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐ ಸೇರಿದಂತೆ 15 ಪಕ್ಷಗಳನ್ನು ಪ್ರತಿವಾದಿಗಳಾಗಿದ್ದಾರೆ. ಇದನ್ನೂ ಓದಿ: ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR
ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಂಬಂಧಿಸಿದ ಪ್ರಾಧಿಕಾರಕ್ಕೆ ರಚನಾತ್ಮಕ ಸುರಕ್ಷತಾ ಪ್ರಮಾಣಪತ್ರವನ್ನು ನೀಡಿಲ್ಲ, ಅಗ್ನಿ ಸುರಕ್ಷತಾ ಅಳತೆ ಪ್ರಮಾಣ ಪತ್ರವನ್ನೂ ನೀಡಿಲ್ಲ, 45,000 ಪ್ರೇಕ್ಷಕರು ಸೇರುವ ಪ್ರದೇಶದಲ್ಲಿ ನಿಯಮಗಳ ಉಲ್ಲಂಘನೆ ದೊಡ್ಡ ವಿಷಯವಾಗಿದೆ ಎಂದು ಅವರು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಕಡ್ಡಾಯ ಅವಶ್ಯಕತೆಗಳನ್ನು ಅನುಸರಿಸದ ಸಂಸ್ಥೆಯು ಸರ್ಕಾರಿ ಪದಾಧಿಕಾರಿಗಳ ನೆರವಿನೊಂದಿಗೆ ಯಾವುದೇ ಕಾರ್ಯವನ್ನು ಮಾಡಲು ಅನುಮತಿಸಬಾರದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಕಾನೂನಿನ ಕಡ್ಡಾಯ ಪಾಲನೆ ಬಗ್ಗೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ವಿಶೇಷವಾಗಿ ಒಡಿಶಾ ಅಗ್ನಿಶಾಮಕ ತಡೆಗಟ್ಟುವಿಕೆ ಮತ್ತು ಅಗ್ನಿ ಸುರಕ್ಷತಾ ನಿಯಮಗಳು 2017ರ ಅಡಿಯಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ
ಪಂದ್ಯಗಳನ್ನು ನಡೆಸಲು ಯಾವುದೇ ವಿರೋಧವಿಲ್ಲ, ಆದರೆ 70 ವರ್ಷಗಳ ಹಳೆಯ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ಪಂದ್ಯಗಳನ್ನು ಏರ್ಪಡಿಸುವುದು ಅಪಾಯಕಾರಿ. ಹಾಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವರೆಗೂ ಪಂದ್ಯಗಳನ್ನು ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಾಕಿ ಏಷ್ಯಾ ಕಪ್ 2022: ಭಾರತಕ್ಕೆ ಕಂಚಿನ ಪದಕ
ಯಾವ ದಿನ – ಎಲ್ಲಿ ಪಂದ್ಯ?
- ಮೊದಲ ಪಂದ್ಯ ಜೂನ್ 09 – ದೆಹಲಿ
- 2ನೇ ಪಂದ್ಯ ಜೂನ್ 12 – ಕಟಕ್
- 3ನೇ ಪಂದ್ಯ ಜೂನ್ 14 – ವಿಶಾಖಪಟ್ಟಣ
- 4ನೇ ಪಂದ್ಯ ಜೂನ್ 17 – ರಾಜ್ಕೋಟ್
- 5ನೇ ಪಂದ್ಯ ಜೂನ್ 19 – ಬೆಂಗಳೂರು