ಬೆಂಗಳೂರು: ರಾಜ್ಯದಲ್ಲಿ ಪಕ್ಷಾಂತರ ಪರ್ವದ ಮಾತುಗಳು ಜೋರಾಗಿವೆ. ಬಿಜೆಪಿಯ ಹಲವು ವಲಸಿಗ ಸಚಿವರು, ಶಾಸಕರು ಕಾಂಗ್ರೆಸ್ಗೆ ಜಂಪ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದು ಬಿಜೆಪಿ, ಕಾಂಗ್ರೆಸ್ನಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇದು ಶೀಘ್ರವೇ ನಡೆಯಬಹುದು ಎನ್ನಲಾಗ್ತಿರುವ ಸಂಪುಟ ಸರ್ಜರಿ ಮೇಲೆಯೂ ಪರಿಣಾಮ ಬೀರುವ ಸಂಭವ ಇದೆ. ಹೀಗಾಗಿ ವಲಸಿಗ ಸಚಿವರೆಲ್ಲಾ ಇವತ್ತು ಮಾತಾಡಿ, ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ. ಎಲ್ಲಾ ಸಚಿವರು ನಾವು ಪಕ್ಷ ಬಿಡಲ್ಲ, ಕಾಂಗ್ರೆಸ್ ಸೇರಲ್ಲ. ಈಗ ಹಬ್ಬಿರೋದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ವಾಗ್ದಾಳಿ ಮಾಡೋದನ್ನು, ಬಿಜೆಪಿ ನಾಯಕತ್ವವನ್ನು ಹೊಗೋಳೋದನ್ನು ಯಾರೊಬ್ರು ಮರೆಯಲಿಲ್ಲ. ಆದರೆ ಸಿದ್ದರಾಮಯ್ಯ ಇದಕ್ಕೆಲ್ಲಾ ತಿರುಗೇಟು ನೀಡುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ತೀನಿ ಎಂದು ನಾನೆಲ್ಲಾದ್ರೂ ಹೇಳಿದ್ದೀನಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ. ಅಸೆಂಬ್ಲಿಯಲ್ಲೇ ಇದನ್ನು ಸ್ಪಷ್ಟಪಡಿಸಿದ್ದೇನೆ. ನಾನು ನಾನಾಗಿ ಯಾರ ಜೊತೆ ಮಾತಾಡಲ್ಲ. ಅವರಾಗಿ ಬಂದ್ರೇ ಮಾತ್ರ ಮಾತನಾಡ್ತೇನೆ ಎಂದಿದ್ದಾರೆ.
ಇತ್ತ ಬೇರೆ ಪಕ್ಷಗಳಿಂದ ಸೇರುವವರು ನಾಳೆನೇ ಬಂದು ಸೇರ್ತಾರೆ ಅಂತ ನಾನು ಹೇಳಿಲ್ಲ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಸೇರ್ತಾರೆ ಅಂತಲೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ಶಾಸಕರ ರಾಘವೇಂದ್ರ ಹಿಟ್ನಾಳ್ ಜೊತೆ ರಹಸ್ಯ ಚರ್ಚೆ ನಡೆಸಿದ್ದು ಕುತೂಹಲ ಕೆರಳಿಸಿತು.
ಬರೀ ವಲಸಿಗ ಸಚಿವರು ಮಾತ್ರವಲ್ಲ, ಕಾಂಗ್ರೆಸ್ ವಿರುದ್ಧ ಇಡೀ ಬಿಜೆಪಿ ಪಟಾಲಮ್ಮೇ ಮುಗಿಬಿದ್ದಿದೆ. ಬಿಜೆಪಿ ಸಚಿವರು, ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಬಿಜೆಪಿಯವರು ಗರಂ ಆಗಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ಇದೆಲ್ಲಾ ಸುಳ್ಳು ಹೇಳಿಕೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕೊಳೆತ ಮಾವಿನ ಹಣ್ಣಿಗೆ, ಗೆದ್ದಲು ತಿಂದ ಮರಕ್ಕೆ ಈಶ್ವರಪ್ಪ ಹೋಲಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ
ಬಿಜೆಪಿ, ಮೋದಿಯಂತಹ ವ್ಯಕ್ತಿಯ ಒಳ್ಳೆಯ ಸೇಬನ್ನ ಬಿಟ್ಟು ಯಾರಾದ್ರೂ ಕೊಳೆತ ಮಾವಿನ ಹಣ್ಣಿನ ಹತ್ತಿರ ಹೋಗ್ತಾರಾ.? ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಳೆತು ನಾರುತ್ತಿದೆ.. ಸುಮ್ನೆ ಡಿಮ್ಯಾಂಡ್ ಕ್ರಿಯೇಟ್ ಮಾಡ್ಕೊಳ್ಳೊಕೆ ಹೀಗೆಲ್ಲಾ ನಾಟಕ ಮಾಡ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಚಿವ ಅಶೋಕ್ ಅಂತೂ, ಸಿದ್ದರಾಮಯ್ಯನವ್ರೇ ಒಬ್ಬ ಪಕ್ಷಾಂತರಿ ಅವರು ಕುಚೋದ್ಯ ಮಾಡ್ತಿದ್ದಾರೆ ಎಂದಿದ್ದಾರೆ. ಸಚಿವ ಸುಧಾಕರ್, ಯಾರ್ಯಾರು ಸಂಪರ್ಕದಲ್ಲಿದ್ದಾರೆ ಮೊದಲು ಹೇಳಲಿ ಎಂದು ಕಾಂಗ್ರೆಸ್ಗೆ ಚಾಲೆಂಜ್ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ನಿಂದ ನೂತನ ಕೋರ್ ಕಮಿಟಿ ರಚನೆ- ಪಟ್ಟಿ ಬಿಡುಗಡೆ ಮಾಡಿದ ಹೆಚ್ಡಿಕೆ
ಕಾಂಗ್ರೆಸ್ ಮುಳುಗೋ ಹಡಗು ಎಂದು ನಿರಾಣಿ ವ್ಯಂಗ್ಯ ಮಾಡಿದ್ದಾರೆ. ಹುಚ್ಚರು ಮಾತ್ರ ಕಾಂಗ್ರೆಸ್ ಸೇರ್ತಾರೆ ಎಂದು ಗೃಹ ಸಚಿವರು ಲೇವಡಿ ಮಾಡಿದ್ದಾರೆ. ಮೊದಲು ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು ಅಂತಾ ಪ್ರಕಟಿಸಲಿ .. ಆಮೇಲೆ ನೋಡಿ ಏನಾಗುತ್ತೆ ಎಂದು ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ. ನಮ್ದು ಕೆಡಾರ್ ಬೇಸ್ಡ್ ಪಾರ್ಟಿ, ಅವ್ರಂಗಲ್ಲ ಎಂದಿದ್ದಾರೆ. ನಾನು ಆಪರೇಷನ್ ಕಮಲದ ಪ್ರಯತ್ನದಲ್ಲಿದ್ದೇನೆ ಎಂದು ಪ್ರೀತಂ ಗೌಡ ಹೇಳಿಕೊಂಡಿದ್ದಾರೆ.