ಬೆಂಗಳೂರು: ಹರೀಶ್ ಬಂಗೇರಾ ನಿರ್ಮಾಣದಲ್ಲಿ ಮೂಡಿ ಬಂದಿರುವ ಅನುಕ್ತ ಚಿತ್ರ ಫೆಬ್ರವರಿ ಒಂದರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ಬಿಡುಗಡೆಗೆ ಕಡೇ ಕ್ಷಣಗಳು ಶುರುವಾಗಿರುವಾಗಲೇ ಈ ಸಿನಿಮಾ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣವಾಗಿರೋದು ಅನುಕ್ತಾ ಬಗ್ಗೆ ಹರಡಿಕೊಳ್ಳುತ್ತಿರೋ ಕೆಲ ಇಂಟರೆಸ್ಟಿಂಗ್ ವಿಚಾರಗಳು!
ಇದು ವರ್ತಮಾನದಲ್ಲಿ ಭೂತಕಾಲದ ರಹಸ್ಯ ಅನಾವರಣಗೊಳ್ಳೋ ವಿಚಾರವನ್ನೂ ಒಳಗೊಂಡಿದೆ. ಇದರ ಒಂದಷ್ಟು ಭಾಗಗಳ ಚಿತ್ರೀಕರಣ ಅಖಂಡ ಐನೂರು ವರ್ಷಗಳಷ್ಟು ಪುರಾತನ ಬಂಗಲೆಯಲ್ಲಿ ನಡೆದಿದೆಯಂತೆ. ಆ ಮನೆ ಇಡೀ ಚಿತ್ರದ ಕೇಂದ್ರಬಿಂದು. ಹೇಳಲಾಗದ ಸತ್ಯಗಳೆಲ್ಲವೂ ಅಲ್ಲಿಯೇ ಅನಾವರಣವಾಗುತ್ತಾ? ಅಷ್ಟಕ್ಕೂ ಅಂಥಾ ಭೀಕರ ಸತ್ಯವೇನೆಂಬುದಕ್ಕೆ ದಿನದೊಪ್ಪತ್ತಿನಲ್ಲಿ ಉತ್ತರ ಸಿಗಲಿದೆ.
ಅನುಕ್ತ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ ಅನ್ನೋದಷ್ಟೇ ಗೊತ್ತಿದೆ. ಆದರೆ ಅದು ಯಾವ ಬಗೆಯದ್ದೆಂಬ ಬಗ್ಗೆ ಚಿತ್ರತಂಡ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ, ಈವರೆಗೆ ಕನ್ನಡದಲ್ಲಿ ನೋಡಿರದಂಥಾ ರೀತಿಯಲ್ಲಿ ಅನುಕ್ತದ ದೃಶ್ಯಾವಳಿಗಳು ತೆರೆದು ಕೊಳ್ಳೋದಂತೂ ಗ್ಯಾರಂಟಿ. ನಾಯಕನಾಗಿಯೂ ನಟಿಸಿರುವ ಕಾರ್ತಿಕ್ ಅತ್ತಾವರ್ ಆ ರೀತಿಯಲ್ಲಿ ಕಥೆ ಬರೆದಿದ್ದಾರೆ. ನಿರ್ದೇಶಕ ಅಶ್ವತ್ಥ್ ಸ್ಯಾಮುಯಲ್ ಅದಕ್ಕೆ ಸರಿಯಾಗಿ ದೃಶ್ಯ ಕಟ್ಟಿದ್ದಾರೆ.
ಈಗ ದೊಡ್ಡ ಮಟ್ಟದಲ್ಲಿ ಎಲ್ಲರನ್ನೂ ಮುಟ್ಟಿರೋ ಈ ಚಿತ್ರ ಅದಕ್ಕೆ ಮಿಗಿಲಾದ ನಿಗೂಢಗಳನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಈಗೆದ್ದಿರೋ ಅಲೆಯೇ ಮಹಾ ಗೆಲುವೊಂದರ ಸೂಚನೆ ನೀಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv