ಭುವನೇಶ್ವರ: ವರ ಮದ್ಯಪಾನ ಮಾಡಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆ ಒಡಿಶಾದ ಜಾಜ್ಪುರದಲ್ಲಿ ನಡೆದಿದೆ.
ಒಡಿಶಾದ ಸ್ವ-ಸಹಾಯ ಗುಂಪಿನ ಕಾರ್ಯಕರ್ತೆ ಸಂಗಮಿತ್ರ ಸೇಥಿ ಈ ದಿಟ್ಟ ನಿರ್ಧಾರ ಕೈಗೊಂಡ ವಧು. ಇವರು ಮದ್ಯಪಾನ ವಿರೋಧಿ ಹೋರಾಟಗಾರ್ತಿಯಾಗಿದ್ದು, ಸುತ್ತಮುತ್ತ ಇರುವ ಹಲವಾರು ಹಳ್ಳಿಗಳಲ್ಲಿ ಮದ್ಯಪಾನ ಅಗಂಡಿ ಮುಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಂಗಮಿತ್ರ ಸೇಥಿ ಮತ್ತು ಆದಿಬಂದು ಸೇಥಿ ಎಂಬುವವರ ಜೊತೆ ಮದುವೆ ನಿಶ್ಚಯವಾಗಿತ್ತು. ಭರ್ಜರಿಯಾಗಿ ಮದುವೆ ಕಾರ್ಯಕ್ರಮ ನಡೆಯುತಿತ್ತು. ಮಂಟಪದಲ್ಲಿ ಸಂಗಮಿತ್ರ ಕುಳಿತ್ತಿದ್ದಾಗ ವರ ಮದ್ಯಪಾನ ಮಾಡಿ ಬಂದಿದ್ದ. ಮದ್ಯಪಾನದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಸಂಗಮಿತ್ರ ಕೂಡಲೇ ಎದ್ದು ನಿಂತು ಮದುವೆ ಬೇಡ ಎಂದು ಹೇಳಿ ಮದುವೆ ಮನೆಯಿಂದಲೇ ಹೊರಟು ಹೋಗಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ವಧು ಸಂಗಮಿತ್ರ ಸೇಥಿ ಅವರು, ಕಳೆದ ಎರಡು ವರ್ಷಗಳಲ್ಲಿ ನಾನು ಹೋರಾಟ ಮಾಡಿ ಹಲವಾರು ಮದ್ಯಪಾನದ ಅಂಗಡಿಯನ್ನು ಮುಚ್ಚಿಸಿದ್ದೇನೆ. ಈಗ ನಾನು ಮದ್ಯಪಾನ ಮಾಡುವ ವ್ಯಕ್ತಿಯನ್ನು ಮದುವೆ ಆಗುವುದು ಎಷ್ಟು ಸರಿ? ಈ ವ್ಯಕ್ತಿಗೆ ನನ್ನನ್ನು ಮದುವೆ ಆಗುವ ಅರ್ಹತೆ ಇಲ್ಲ ಎಂದು ಖಡಕ್ ಮಾತನ್ನು ಆಡಿದ್ದಾಳೆ.
ಎರಡು ಮನೆಯ ಪೋಷಕರು ವಧು ಸಂಗಮಿತ್ರ ಸೇಥಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಸಂಗಮಿತ್ರ ಅವರು ಒಪ್ಪಿಗೆ ನೀಡಲಿಲ್ಲ. ಈ ಕಾರಣಕ್ಕೆ ಕೋಪಗೊಂಡ ವರನ ತಂದೆ ಮದುವೆಗೆಂದು ನೀಡಿದ್ದ 71 ಸಾವಿರ ಬೆಲೆ ಬಾಳುವ ಚಿನ್ನದ ಸರ ಮತ್ತು ಉಂಗುರವನ್ನು ವಾಪಸ್ ನೀಡುವಂತೆ ಹೇಳಿದ್ದಾರೆ.