ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಲವು ದೇವಾಲಯಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ಇಂದು ನೆಲಮಂಗಲ ಕಂದಾಯ ಅಧಿಕಾರಿಗಳು ಪಟ್ಟಿ ಮಾಡಿಕೊಂಡಿರುವ ದೇವಾಲಯಗಳ ತೆರವಿಗೆ ಮುಂದಾಗಿದ್ದಾರೆ.
ಈಗಾಗಲೇ ನೆಲಮಂಗಲ ತಾಲೂಕಿನ ಸಿಎ, ಪಾರ್ಕ್, ರಸ್ತೆ ಬದಿಯ 15ಕ್ಕೂ ಹೆಚ್ಚು ದೇವಾಲಯಗಳನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪುರಾತನ ಮಣ್ಣೆಯ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯ ತೆರವಿಗೆ ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ವಿರೋಧ ಮಾಡಿದ್ದು, ತಾಲೂಕಿನ ಮಣ್ಣೆ ಗ್ರಾಮದ ಕೆರೆ ಏರಿ ಮೇಲೆ ಇರುವ ದೇವಾಲಯ ತೆರವಿಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ.
ಈ ದೇವಾಲಯದಿಂದ ಕೆರೆ ಏರಿಯ ಮೇಲೆ ಅಪಘಾತ ತಪ್ಪಿದೆ, ಸಾಕಷ್ಟು ವರ್ಷದಿಂದ ಪೂಜೆ ಪುರಸ್ಕಾರವನ್ನ ಮಾಡಿಕೊಂಡು ಭಕ್ತಿಯನ್ನು ಸ್ಥಳೀಯ ಜನರು ಮೆರೆದಿದ್ದಾರೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯ ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು, ತ್ಯಾಮಗೊಂಡ್ಲು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.