ಗದಗ: ಬಡ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ ಸರ್ಕಾರ ಕೋಟಿ ಕೋಟಿ ಹಣ ನೀಡುತ್ತಿದೆ. ಆದರೆ ಜಿಲ್ಲೆಯ ಅಂಗನವಾಡಿಯ ಅಧಿಕಾರಿಗಳು ಮಕ್ಕಳಿಗೆ ಕಳಪೆ ಆಹಾರವನ್ನು ನೀಡುತ್ತಿದ್ದಾರೆ.
ರವೆ, ಶೇಂಗಾದಲ್ಲಿ ಹುಳಗಳು ಸಾರ್ ಹುಳಗಳು, ಕಳಪೆ ಗುಣಮಟ್ಟದ ಹೆಸರುಕಾಳು, ಕಡಲೆಕಾಳು, ತೊಗರಿ ಬೆಳೆ, ಕೆಟ್ಟು ಹೋಗಿರುವ ಬೆಲ್ಲ ಇದು ಬಡ ಮಕ್ಕಳ ಅಪೌಷ್ಟಿಕತೆ ನೀಗಿಸಲು ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ನೀಡುವ ಆಹಾರದಲ್ಲಿ ಕಂಡು ಬಂದಿದೆ.
ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೂಪಾ ಅಂಗನವಾಡಿ ಎಮ್.ಎಸ್.ಪಿ.ಸಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದಾಗ ಈ ಕಳಪೆ ಆಹಾರ ಮತ್ತು ಅಧಿಕಾರಿಗಳ ನಿಜ ಬಣ್ಣ ಬಯಲಾಗಿದೆ. ಇಂತಹ ಕಳಪೆ ಆಹಾರವನ್ನು ಮಕ್ಕಳು ತಿಂದ್ರೆ ಪೌಷ್ಟಿಕಾಂಶ ಬರಲು ಹೇಗೆ ಸಾಧ್ಯ ಅಂತ ಅಧ್ಯಕ್ಷೆ ರೂಪಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಗದಗದ ಎಂಎಸ್ಪಿಸಿ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಸಾಮಗ್ರಿಗಳ ಪೂರೈಕೆ ಮಾಡುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಕಳಪೆ ಆಹಾರ ಪೂರೈಕೆ ಮಾಡಿದ ಅಧಿಕಾರಿಗಳು, ಗುತ್ತಿಗೆದಾರರನ್ನ ಸಸ್ಪೆಂಡ್ ಮಾಡುವಂತೆ ಜಿಲ್ಲಾ ಪಂಚಾಯ್ತಿ ಸಿಇಓ ಮಂಜುನಾಥ್ ಹಾಗೂ ಡಿಸಿಗೆ ಜಿಪಂ ಅಧ್ಯಕ್ಷೆ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಹೇಳಿದ್ದಾರೆ.
ಪ್ರತಿಯೊಂದು ಆಹಾರ ಪದಾರ್ಥಗಳ ತೂಕದಲ್ಲೂ ಭಾರೀ ಮೋಸ ನಡೆಯುತ್ತಿರುವುದು ಸಹ ಕಂಡು ಬಂದಿದೆ. ಇದರಲ್ಲಿ ಎಂಎಸ್ಪಿಸಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂಬ ಆರೋಪವಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv