ಅನೇಕಲ್: ಇತಿಹಾಸ ಪ್ರಸಿದ್ಧ ಇರುವ ಹಾಗೂ ಐತಿಹಾಸಿಕ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ರೈಲ್ವೆ ಹೈಟೆನ್ಷನ್ ವೈರ್ ಅಡ್ಡಿಯಾಗಿದೆ.
ಬೆಂಗಳೂರಿನಿಂದ ಸೇಲಂ ರೈಲ್ವೆ ಮಾರ್ಗದ ದಾರಿಯಲ್ಲಿ ಹೈಟೆನ್ಷನ್ ವೈರ್ ಹಾದುಹೋಗಿರುವ ಪರಿಣಾಮ ಈ ಬಾರಿ ಜಾತ್ರೆ ನಡೆಯುತ್ತಾ ಇಲ್ವೋ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಊರಿನ ಗ್ರಾಮಸ್ಥರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಬೆಂಗಳೂರು ಕೂಗಳತೆ ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬೆಂಗಳೂರಿನಿಂದ ಸೇಲಂ ಮಾರ್ಗಕ್ಕೆ ಹೈಟೆನ್ಷನ್ ವೈರ್ ರೈಲ್ವೆ ಹಳಿ ಮೇಲೆ ಹಾದು ಹೋದ ಪರಿಣಾಮ ಜಾತ್ರೆ ನಡೆಸಲು ವಿಘ್ನ ಎದುರಾಗಿದೆ. ಹೀಗಾಗಿ ಜಾತ್ರೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನ ಗ್ರಾಮಸ್ಥರು ಹಾಗೂ ಹಲವು ಮುಖಂಡರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ್ ಅಂಗಡಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸ್ಥಳೀಯ ಶಾಸಕ ಬಿ. ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆಂದು ತಿಳಿಸಿದರು. ಜಾತ್ರೆ ಪ್ರಮುಖ ಆಕರ್ಷಣೆ ಕುರ್ಜು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಹುಸ್ಕೂರ್ ಮದ್ದುರಮ್ಮ ಜಾತ್ರೆಗೆ 14 ಗ್ರಾಮಗಳಿಂದ ನೂರು ಅಡಿಗೂ ಎತ್ತರದ ಕುರ್ಜುಗಳು ಬರುತ್ತವೆ. ಈ ಕುರ್ಜುಗಳನ್ನ ಎತ್ತುಗಳು ತುಳಿದುಕೊಂಡು ಬರುವುದು ವಿಶೇಷ. ಈ ಬಾರಿ ಹೈಟೆನ್ಶನ್ ವೈರ್ ಅಳವಡಿಕೆ ಪರಿಣಾಮ ಕೊಡತಿ, ಸೂಲುಕುಂಟೆ, ಚೊಕ್ಕಸಂದ್ರ ಹಾರೋಹಳ್ಳಿ, ಕಗ್ಗಲಿಪುರ ನಾರಾಯಣಘಟ್ಟ, ಸಿಂಗೇನ ಅಗ್ರಹಾರ, ಗ್ರಾಮಗಳ ಕುರ್ಜು ಗಳು ಹುಸ್ಕೂರು ಜಾತ್ರೆಗೆ ಬರಬೇಕಾದರೆ ರೈಲ್ವೆ ಹಳಿಯನ್ನು ದಾಟಿ ಬರಬೇಕು. ಹಾಗಾಗಿ ಈ ಮಾರ್ಗದಲ್ಲಿ ರೈಲ್ವೆಯ ಹೈಟೆನ್ಷನ್ ವೈರ್ ಹಾದುಹೋದ ಪರಿಣಾಮ ಕುರ್ಜುಗಳು ರೈಲ್ವೇ ಹಳಿ ದಾಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ.