ಬೆಂಗಳೂರು: ಖಾಸಗಿ ವಾಹಿನಿ ನಿರೂಪಕ ಚಂದನ್ ಪತ್ನಿ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗ ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿ, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಮನನೊಂದಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮೀನಾ ಮಗನನ್ನು ಕೊಲೆಗೈದಿದ್ದಾರೆ.
ಸದ್ಯ ಮೀನಾ ಸ್ಥಿತಿ ಚಿಂತಾಜನಕವಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.