ನವದೆಹಲಿ: ಖಲಿಸ್ತಾನ್ ಹೋರಾಟಗಾರ ಅಮೃತ್ಪಾಲ್ ಸಿಂಗ್ (Amritpal Singh) ಪಂಜಾಬ್ನಿಂದ (Punjab) ತಲೆಮರಿಸಿಕೊಂಡಿದ್ದು, ಆಪ್ತರು, ಸ್ನೇಹಿತರ ಸಹಕಾರ ಪಡೆದು ಪ್ರತಿ 12 ಗಂಟೆಗೊಮ್ಮೆ ಸ್ಥಳ ಬದಲಿಸುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಅಮೃತ್ಪಾಲ್ ಸಿಂಗ್ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು ಹಗಲು ರಾತ್ರಿ ಎನ್ನದೇ ಹುಡುಕಾಟ ಮುಂದುವರಿಸಿದ್ದಾರೆ.
ಮೂಲಗಳ ಪ್ರಕಾರ, ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಹರಡಿರುವ ಸಿಂಗ್ ಅವರ ಬೆಂಬಲಿಗರ ಪಟ್ಟಿಯನ್ನು ಪಂಜಾಬ್ ಪೊಲೀಸರು ಸಿದ್ಧಪಡಿಸಿದ್ದಾರೆ. ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಹರಿಯಾಣ, ಪಂಜಾಬ್, ಉತ್ತರಾಖಂಡ ಅಥವಾ ಹಿಮಾಚಲ ಪ್ರದೇಶವನ್ನು ಹೊರತುಪಡಿಸಿ, ಸಿಂಗ್ ದೆಹಲಿಯಲ್ಲಿ ಅಡಗಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಮೃತ್ಪಾಲ್ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್
ಅಮೃತ್ಪಾಲ್ ಸಿಂಗ್ ಮೊಬೈಲ್ಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ಆತನ ನಿಖರ ಸ್ಥಳವನ್ನು ಪತ್ತೆಹಚ್ಚಲು ಏಜೆನ್ಸಿಗಳಿಗೆ ಸಾಧ್ಯವಾಗುತ್ತಿಲ್ಲ. ಆತ ಹಳೆಯ ಫೀಚರ್ ಫೋನ್ ಬಳಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಸರಿಯಾದ ಲೊಕೇಷನ್ ಕೂಡಾ ಪತ್ತೆಯಾಗುತ್ತಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಗುಪ್ತಚರ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಅಮೃತ್ಪಾಲ್ ಸಿಂಗ್ಗೆ ಪಾಪಲ್ಪ್ರೀತ್ ಎನ್ನುವ ವ್ಯಕ್ತಿ ಸಹಾಯ ಮಾಡುತ್ತಿದ್ದು, ಪಂಜಾಬ್ನಿಂದ ಹರಿಯಾಣದ ಕುರುಕ್ಷೇತ್ರದಲ್ಲಿರುವ ಬಲ್ಜಿತ್ ಕೌರ್ ಅವರ ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದರು. ಸದ್ಯ ಪಾಪಲ್ಪ್ರೀತ್ ಅನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್ಮೇಲ್ – ಅಮೃತ್ಪಾಲ್ ಕರಾಳ ಮುಖ ಬಯಲು