ಬೆಂಗಳೂರು: ಉತ್ತರ ಪ್ರದೇಶ ಎಲ್ಲಿ..? ಉತ್ತರ ಕರ್ನಾಟಕ ಎಲ್ಲಿ..? ಆದ್ರೆ ಶಾ, ಮೋದಿ ಜೋಡಿಗೆ ಇವೆರಡು ಒಂದೇ ಅನ್ನಿಸಿರಬೇಕು. ಅದಕ್ಕಾಗಿ ಉತ್ತರ ಕರ್ನಾಟಕದಿಂದ ಬಿಎಸ್ವೈ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ದೇಶದ ರಾಜಕಾರಣದಲ್ಲಿ ಚಾಣಕ್ಯ ಜೋಡಿ ನಡೆದದ್ದೇ ದಾರಿ. ಷಾ, ಮೋದಿ ಅವರ ಮಂತ್ರ ತಂತ್ರಗಳೆಲ್ಲವೂ ಬಹುಪಾಲು ಸಕ್ಸಸ್ ಆಗ್ತಿವೆ. ಅದೇ ತಂತ್ರಗಾರಿಕೆಯನ್ನ ರಾಜ್ಯದಲ್ಲೂ ಬಳಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಮೋದಿಯನ್ನ ಕಣಕ್ಕಿಳಿಸಿ ಉತ್ತರಪ್ರದೇಶವನ್ನೇ ಬಾಚಿಕೊಂಡ ಮಾದರಿಯಲ್ಲೇ ಬಿಎಸ್ವೈ ಅವರನ್ನ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಅದರಲ್ಲೂ ಮುಂಬೈ ಕರ್ನಾಟಕದ ಯಾವಾದಾದರೊಂದು ಕ್ಷೇತ್ರ ಬೆಟರ್ ಅಂತಾ ಅಮಿತ್ ಶಾಗೆ ವರದಿ ಹೋಗಿದೆ. ವರದಿ ಆಧರಿಸಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಅಮಿತ್ ಶಾ ಬಿಎಸ್ವೈಗೆ ಸೂಚಿಸಿರೋದು ಎನ್ನಲಾಗ್ತಿದೆ. ರಾಜ್ಯ ನಾಯಕರ ಗಮನಕ್ಕೂ ತಾರದೇ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್ ಅವರ ಜತೆ ಚರ್ಚಿಸಿ ನಿರ್ಧಾರಕ್ಕೆ ಶಾ ಬಂದಿದ್ರು ಎನ್ನಲಾಗಿದೆ.
ಇನ್ನೊಂದೆಡೆ ಶಾ ತಂತ್ರಗಾರಿಕೆಗೆ ಹಿಂದೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಪ್ಲಾನ್ ಇದೆಯಂತೆ. ಒಂದು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರನ್ನ ಒಂದುಗೂಡಿಸೋದು, ಇನ್ನೊಂದು ಬಿಎಸ್ ವೈ ಏಕಾಚಕ್ರಾಧಿಪತ್ಯವನ್ನ ವೀಕ್ ಮಾಡೋದು ಶಾ ಮಾಸ್ಟರ್ ಗೇಮ್ ಎನ್ನಲಾಗಿದೆ.
ಬಿಎಸ್ವೈಗೆ ಇಂತಹ ಕಡೆ ಸ್ಪರ್ಧೆ ಮಾಡಬೇಕು ಅನ್ನೋದನ್ನ ಸೂಚಿಸುವ ಮೂಲಕ ಟಿಕೆಟ್ ಫೈನಲ್ ಮಾಡೋರೇ ನಾವು ಅನ್ನೋ ಸಂದೇಶ ರವಾನಿಸುವ ತಂತ್ರವೂ ಅಡಗಿದೆ ಅಂತಾ ಬಿಜೆಪಿ ಮೂಲಗಳು ಹೇಳುತ್ತಿವೆ. ಇದರಿಂದಾಗಿಯೇ ಬಿಜೆಪಿ ಆಪ್ತರೆಲ್ಲರೂ ಈಗ ಆತಂಕಕ್ಕೀಡಾಗಿದ್ದು, ಟಿಕೆಟ್ ಯಾರಿಗೆ ಕೊಡ್ತಾರಪ್ಪ ಅಂತಾ ತಲೆಕೆಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಾಸ್ ಲೀಡರ್ ಸ್ಪರ್ಧೆಯ ಮೂಲಕ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಿಸಿಕೊಳ್ಳಲು ಗೇಮ್ ಪ್ಲಾನ್ ನಡೆದಿದ್ದು, ಉತ್ತರ ಪ್ರದೇಶ ಮಾದರಿ ಉತ್ತರ ಕರ್ನಾಟಕದಲ್ಲಿ ವರ್ಕ್ ಔಟ್ ಆಗುತ್ತಾ…? ಬಿಎಸ್ವೈ ಎಡಬಲದಲ್ಲಿ ಇರುವವರಿಗೆಲ್ಲಾ ಟಿಕೆಟ್ ಸಿಗೋದು ಡೌಟಾ ಅನ್ನೋದನ್ನ ಕಾದುನೋಡಬೇಕಿದೆ.