ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಗ್-ಬಿ ಅಮಿತಾಬ್ ಬಚ್ಚನ್ ಬಿಹಾರ ರಾಜ್ಯದ ಸುಮಾರು 2,100 ಬಡ ರೈತರ ಸಾಲ ತೀರಿಸಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಜೊತೆಗೆ ಮಗ ಅಭಿಷೇಕ್ ಹಾಗೂ ಮಗಳು ಶ್ವೇತಾ ಜೊತೆಯಿರುವ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಮಿತಾಬ್ ತಮ್ಮ ಬ್ಲಾಗ್ನಲ್ಲಿ, ಮಾತು ನೀಡಿದ್ದನ್ನು ಪೂರ್ಣಗೊಳಿಸಿದ್ದೇನೆ. ಸಾಲ ಹೊಂದಿದ 2,100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಿದ್ದರು. ಅದಕ್ಕೂ ಮೊದಲು 350 ರೈತರ ಸಾಲವನ್ನು ಪಾವತಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅಮಿತಾಬ್ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದರು.