ಉಡುಪಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಮೋದಿ 2019 ರಲ್ಲಿ ಮತ್ತೆ ಅಧಿಕಾರ ಹಿಡಿಯುತ್ತಾರೆ ಅಂತ ಅಮೇರಿಕಾದ ಹಿಂದೂ ಧರ್ಮಗುರು, ಸಂಶೋಧಕ ಡೇವಿಡ್ ಫ್ರಾವ್ಲೇ ಹೇಳಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರಧಾನಿ ಮೋದಿ ಭಾರತದ ಪುರಾತನ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಮೋದಿ ಆಡಳಿತಾತ್ಮಕ ಮತ್ತು ಭಾರತೀಯ ನಾಗರೀಕತೆ ಪ್ರತಿಪಾದಕ ಎಂದ ಅವರು, ವಿಶ್ವದಲ್ಲಿ ಭಾರತದ ಧ್ವನಿಯನ್ನು ಮೋದಿ ಮೊಳಗಿಸಿದ್ದಾರೆ ಎಂದು ಸರ್ಟಿಫಿಕೇಟ್ ನೀಡಿದರು.
ಪಟೇಲರು ದೇಶವ ಒಗ್ಗೂಡಿಸಿದರು:
ಯೂನಿಟಿ ಆಫ್ ಸ್ಟ್ಯಾಚು ಬಗ್ಗೆ ವಿರೋಧಿಸುತ್ತಿರುವುದು ಸರಿಯಲ್ಲ. ಸರ್ದಾರ್ ವಲ್ಲಭ ಭಾಯ್ ಪಟೇಲರು ಭಾರತವನ್ನು ಒಗ್ಗೂಡಿಸಿದವರು. ದೇಶದಲ್ಲಿ ಅವರಿಗೆ ಪುತ್ಥಳಿ ಮೂಲಕ ದೊಡ್ಡ ಗೌರವ ಸಿಕ್ಕಿದೆ. ಇದಕ್ಕೆ ಯಾರಾದರೂ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಮೋದಿ ಭಾರತದ ಸಾಮಥ್ರ್ಯ ವಿಶ್ವದ ಮುಂದೆ ಪ್ರದರ್ಶಿಸಿದ್ದಾರೆ. ಪುತ್ಥಳಿಗೆ ತಗಲಿರುವ ವೆಚ್ಚದ ಬಗ್ಗೆ ಲೆಕ್ಕ ಹಾಕುವುದಕ್ಕಿಂತ ಮುಂದೆ ಅದರಿಂದ ದೇಶಕ್ಕೆ ಸಿಗುವ ಗೌರವ, ಲಾಭದ ಬಗ್ಗೆ ಆಲೋಚಿಸಿ. ನರೇಂದ್ರ ಮೋದಿ ಒಂದು ಕುಟುಂಬ- ಪಕ್ಷವಾಗಿ ಉಳಿದಿಲ್ಲ ಎಂದರು.
ಕಮ್ಯುನಿಸ್ಟ್ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆಯಿಲ್ಲ:
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಭಾರತದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಅಧಿಕಾರದಲ್ಲಿ ಇರುವುದರಿಂದ ಕಮ್ಯೂನಿಸ್ಟರಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲ. ಆತ್ಮ, ಈಶ್ವರ- ಭಗವಂತನ ಮೇಲೆ ಅವರಿಗೆ ನಂಬಿಕೆಯಿಲ್ಲ. ಹಿಂದೂ ದೇವಸ್ಥಾನದ ಆದಾಯ ಅಲ್ಲಿನ ಸರಕಾರಕ್ಕೆ ಬೇಕು. ಅಲ್ಲಿನ ಸಂಪ್ರದಾಯ, ನಂಬಿಕೆ ಬೇಕಾಗಿಲ್ಲ. ದೇವಸ್ಥಾನದ ವಿಚಾರದಲ್ಲಿ ಕೇರಳ ಸರ್ಕಾರ ಮೂಗು ತೂರಿಸಬಾರದು. ಶಬರಿಮಲೆ ದೇವಸ್ಥಾನಕ್ಕೆ ಅದರದ್ದೇ ಆದ ಪದ್ಧತಿ ಇದೆ. ಅಯ್ಯಪ್ಪ ಭಕ್ತರ ನಂಬಿಕೆಗೆ ಸರಕಾರ ಬೆಲೆ ಕೊಡಬೇಕು ಕೊಲ್ಲೂರಿನಲ್ಲಿ ಡೇವಿಡ್ ಫ್ರಾವ್ಲೇ ಒತ್ತಾಯಿಸಿದರು.
ವೇದ, ಜ್ಯೋತಿಷ್ಯ, ಆಯುರ್ವೇದ ವಿಚಾರದಲ್ಲಿ ಸಂಶೋಧಕನಾಗಿರುವ ಡೇವಿಡ್, ಭಾರತೀಯ ಸಂಸ್ಕೃತಿ ಬಗ್ಗೆ 30 ಪುಸ್ತಕ ಬರೆದಿದ್ದಾರೆ. ಅಮೇರಿಕಾದ ಪ್ರಜೆಯಾಗಿರುವ ಅವರು ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv