ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ಶನಿವಾರ ಮೃತಪಟ್ಟಿದ್ದು, ಸೋಮವಾರ ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. ಸದ್ಯ ಈಗ ಹಾಲು-ತುಪ್ಪ ಕಾರ್ಯವನ್ನು ಡಿಸೆಂಬರ್ 4ಕ್ಕೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಂಠೀರವ ಸ್ಟುಡಿಯೋದಲ್ಲಿ ಇಂದು ಅಂಬಿ ಅಸ್ಥಿ ಪೂಜೆಯನ್ನು ಮಾತ್ರ ಮಾಡಲಾಯಿತು. 11ನೇ ದಿನಕ್ಕೆ ಅಂದರೆ ಡಿಸೆಂಬರ್ 4ರಂದು ಹಾಲು-ತುಪ್ಪ ಕಾರ್ಯ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇಂದು ಹಾಲು-ತುಪ್ಪ ಕಾರ್ಯ ನಡೆಯಲಿದೆ ಎಂದು ಮಂಡ್ಯದಿಂದ ಅಭಿಮಾನಿವೊಬ್ಬರು ತೆಂಗಿನ ಹೊಂಬಾಳೆಯನ್ನು ತಂದಿದ್ದರು. ಇಂದು ಹಾಲು-ತುಪ್ಪ ಕಾರ್ಯ ನಡೆಯುವುದಿಲ್ಲ ಎಂದು ಅಭಿಮಾನಿ ಮಾಹಿತಿ ಪಡೆದ ನಂತರ 11ನೇ ದಿನಕ್ಕೆ ಹೊಂಬಾಳೆ ತರುತ್ತೇನೆ ಎಂದು ಹೇಳಿದ್ದಾರೆ.
ಅಭಿಷೇಕ್ ಅವರು ಅಭಿಮಾನಿಗಳು ತಂದ ಹಾಲನ್ನು ಪಡೆದು ಅಸ್ಥಿ ಮೇಲೆ ಹಾಕಿ ಪೂಜೆ ನೆರವೇರಿಸಿದ್ದಾರೆ. ಅಲ್ಲದೇ ಹೊಂಬಾಳೆ ಮತ್ತು ತುಪ್ಪ ಹನ್ನೊಂದನೇ ದಿನಕ್ಕೆ ತನ್ನಿ ಎಂದ ಅಭಿಷೇಕ್ ಆಪ್ತರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಭಿಷೇಕ್ ಚಿತೆಯಲ್ಲಿನ ಅಗ್ನಿಯನ್ನು ಹಾಲು ಹಾಕುವ ಮೂಲಕ ಶಾಂತಿ ಮಾಡುತ್ತಿದ್ದಾರೆ. ಇಬ್ಬರು ಪುರೋಹಿತರು ಅಸ್ಥಿ ಶಾಂತಿ ಪೂಜೆಯನ್ನು ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದ್ದರು. ಆಗ ಅಭಿಷೇಕ್ ಪೂಜೆ ನಂತರ ಅಭಿಮಾನಿಗಳನ್ನ ಒಳಗಡೆ ಬಿಡಿ ಎಂದಿದ್ದಾರೆ.
ಅಭಿಷೇಕ್ ಅಸ್ಥಿ ಶಾಂತಿ ಪೂಜೆ ನೋಡಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸರದಿ ಸಾಲಿನಲ್ಲಿ ಸ್ಟುಡಿಯೋ ಒಳಗಡೆ ಬರುವುದ್ದಕ್ಕೆ ಅವಕಾಶ ನೀಡಿದ್ದಾರೆ. ಈ ವೇಳೆ ಅಭಿಷೇಕ್ ಅಭಿಮಾನಿಗಳಿಗೆ ಅಂಬಿ ಚಿತಾಭಸ್ಮ ನೀಡಿದ್ದಾರೆ. ಅರ್ಧ ಚಿತಾ ಭಸ್ಮವನ್ನ ನಾವು ಶ್ರೀರಂಗಪಟ್ಟಣಕ್ಕೆ ವಿಸರ್ಜಿಸುತ್ತೇವೆ. ಇನ್ನು ಅರ್ಧ ಚಿತಾಭಸ್ಮವನ್ನು ಜೊತೆಯಾಗಿ ಇಟ್ಟುಕೊಳ್ಳುತ್ತೇವೆ ಎಂದು ಅಭಿಮಾನಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv