ಚಂಡೀಗಢ: ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವುದೇಕೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ರೈತರನ್ನು ಪ್ರಶ್ನಿಸಿದ್ದಾರೆ.
ರೈತರ ಬಳಿ ಪ್ರಧಾನಮಂತ್ರಿಗಳು ಕ್ಷಮೆಯಾಚಿಸಿದ್ದಾರೆ. ಆದರೆ ಕಾಯ್ದೆಗಳನ್ನು ರದ್ದುಪಡಿಸುವ ಸಂಬಂಧ ಸದನ ಯಾವಾಗ ನಡೆಯುತ್ತದೆ ಎಂಬುದಷ್ಟೇ ಪ್ರಶ್ನೆಯಾಗಿತ್ತು. ನ.29ರಂದು ಸದನ ನಡೆಯಲಿದೆ. ಮಸೂದೆಯನ್ನು ಹೊರಡಿಸಿದರು, ಈಗ ರದ್ದುಗೊಳಿಸಲಾಗುವುದು. ಈ ವಿಷಯ ಅಲ್ಲಿಗೆ ಮುಗಿಯುತ್ತದೆ. ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿಗಳು ಘೋಷಿಸಿದ ನಂತರವೂ, ರೈತರು ಪ್ರತಿಭಟನೆ ಮುಂದುವರಿಸಲು ಕುಳಿತಿರುವುದರ ಪ್ರಯೋಜನವಾದರೂ ಏನು ಎಂದು ಅಮರೀಂದರ್ ಸಿಂಗ್ ಕೇಳಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ
ಕೃಷಿ ಕಾಯ್ದೆಗಳ ವಿರುದ್ಧ ನಾವು ಆರಂಭಿಸಿದ ಹೋರಾಟಕ್ಕೆ ನ.26ಕ್ಕೆ ಒಂದು ವರ್ಷವಾಗಲಿದೆ. ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಆ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದರು. ಅದಕ್ಕೆ ಅಮರೀಂದರ್ ಸಿಂಗ್ ಮೇಲಿನಂತೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ: ರಾಕೇಶ್ ಟಿಕಾಯತ್
ಮತ್ತೊಂದು ಗಮನಾರ್ಹ ವಿಚಾರವೆಂದರೆ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ರೈತರ ಸಮಸ್ಯೆಯನ್ನು ಪರಿಹರಿಸಿದರೆ 2022ರಲ್ಲಿ ಪಂಜಾಬ್ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಈ ನಡುವೆ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಈಗ ಅಮರೀಂದರ್ ಸಿಂಗ್ ಅವರ ಮುಂದಿನ ನಡೆ ಏನೆಂಬುದು ಪ್ರಶ್ನೆಯಾಗಿದೆ.