ರಾಯಚೂರು: ಮಾಲೀಕರಿಗೆ ವಂಚಿಸಿ ಲಕ್ಷಾಂತರ ರೂಪಾಯಿ ಹಣ ಕದ್ದಿದ್ದ ಚಾಲಕ ಸೇರಿ ಮೂವರನ್ನ ಬಂಧಿಸುವಲ್ಲಿ ಸಿಂಧನೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಸಿಂಧನೂರಿನಲ್ಲಿ ಆಗಸ್ಟ್ 18 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು 48 ಗಂಟೆಯಲ್ಲಿ ಭೇದಿಸಿದ್ದಾರೆ.
ವಾಹನ ಚಾಲಕ ಸೈಯದ್ ಜುಬೇರ್, ಚಾಲಕನ ಸಹೊದರ ಸೈಯದ್ ಕಲಂದರ್, ಚಾಲಕನ ಸ್ನೇಹಿತ ಗಣೇಶ್ ಬಂಧಿತ ಆರೋಪಿಗಳು. ಆರೋಪಿಗಳಿಂದ 46,23,360 ರೂ. ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ. ರಾಯಚೂರು ನಗರದ ಬೀಡಿ ಕಂಪನಿಯಲ್ಲಿ ಟಾಟಾ ಟರ್ಬೋ ಕಂಟೇನರ್ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೈಯದ್ ಜುಬೇರ್ ಮಾಲೀಕರಿಗೆ ವಂಚಿಸಿ ಹಣ ದೋಚಿ ಸಿಕ್ಕಿಬಿದ್ದಿದ್ದಾನೆ.
ಸಿಂಧನೂರಿನಲ್ಲಿ ಆಗಸ್ಟ್ 18 ರಂದು ರಾತ್ರಿ 8:30 ರ ಸುಮಾರಿಗೆ ಕಂಟೇನರ್ ವಾಹನದಲ್ಲಿ ಹಣ ಇಟ್ಟು ಸೇಲ್ಸ್ ಮನ್ ಹಾಗೂ ಚಾಲಕ ಊಟಕ್ಕೆ ಹೋದಾಗ ಕಳ್ಳತನವಾಗಿತ್ತು. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲೂ ಇದೇ ರೀತಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ವಿಚಾರಣೆಯಲ್ಲಿ ಆರೋಪಿ ಚಾಲಕ ಸತ್ಯ ಬಾಯಿ ಬಿಟ್ಟಿದ್ದಾನೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣಕ್ಕೆ- ಮದುವೆಯ ಫೋಟೋನಾ ಬಿಜೆಪಿಯವ್ರು ಎಡಿಟ್ ಮಾಡಿದ್ದಾರೆ: ಜೀವಿಜಯ
ತನ್ನ ಸಹೋದರ ಹಾಗೂ ಸ್ನೇಹಿತನ ಜೊತೆ ಸೇರಿ ವಾಹನದ ನಕಲಿ ಕೀ ಬಳಸಿ ಕಳ್ಳತನಕ್ಕೆ ಮೊದಲೇ ಯೋಜನೆ ರೂಪಿಸಿ ಹಣ ದೋಚಿರುವುದಾಗಿ ಸೈಯದ್ ಜುಬೇರ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.