ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಇತಿಶ್ರೀಯಾಗಿದ್ದು, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ವಿಶ್ವಾಸ ಮತಯಾಚನೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸರ್ಕಾರ ಪತನವಾಗಿದೆ. ಸದ್ಯ ಪುಣೆಯಲ್ಲಿದ್ದೇವೆ, ನಮ್ಮ ಜೊತೆ ಬಂದಿರುವ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಜೊತೆ ಸಾತ್ವಿಕ ರಾಜಕಾರಣ ಮಾಡುವ ಕುರಿತು ಹಾಗೂ ಸಾತ್ವಿಕ ವಾತಾವರಣ ಸೃಷ್ಟಿಸುವ ಕುರಿತು ಸಹ ಚರ್ಚಿಸಲಾಗುವುದು ತಿಳಿಸಿದರು.
ನಮಗೆ ಕೈ ಕೊಟ್ಟು ಹೋದವರು ನಿಮಗೂ ಕೈ ಕೊಡುವುದಿಲ್ಲವೇ ಎಂದು ಸಿಎಂ ಸದನದಲ್ಲಿ ಬಿಜೆಪಿಗೆ ಕೇಳಿದ ಪ್ರಶ್ನೆ ಕುರಿತು ಉತ್ತರಿಸಿದ ಅವರು, ಹೇಳಿದವರೂ ಸಹ ಎಲ್ಲರಿಗೂ ಉದ್ದಕ್ಕೂ ಕೈ ಕೊಟ್ಟೇ ಬಂದವರು. ಸುಮ್ಮನೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಪಕ್ಷ ದ್ರೋಹದ ರೂವಾರಿ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಪಕ್ಷ ದ್ರೋಹ ಮಾಡಿಲ್ಲ. ಶಾಸಕಾಂಗ ಪಕ್ಷದ ನಾಯಕರಿಗೆ ಹಾಗೂ ಸಿಎಂಗೆ ಈ ಹಿಂದೆಯೇ ತಿಳಿಸಿದ್ದೆ. ನಾನು ಡೀಸೆಂಟ್ ಹಾಕಿದ್ದೇನೆ ಡಿಫೆಕ್ಟ್ ಹಾಕಿಲ್ಲ. ನಾನು ಯಾವತ್ತೂ ಡಿಫೆಕ್ಟ್ ಮಾಡಿಲ್ಲ ಎಂದು ತಿಳಿಸಿದರು.
ಇಷ್ಟು ವರ್ಷಗಳ ಕಾಲ ಪಕ್ಷದಲ್ಲಿದ್ದುಕೊಂಡು ಇಂತಹ ಪರಿಸ್ಥಿತಿಗೆ ತಂದರಲ್ಲ ಎಂಬ ಕೊರಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರಗುವವರು ನಾವಲ್ಲ. ಕುರ್ಚಿಗೆ ಅಂಟಿಕೊಂಡವರು. ನಾವು ಕುರ್ಚಿಗೆ ಅಂಟಿಕೊಂಡಿಲ್ಲ. ನಮಗೆ ಆ ರೀತಿ ಅನಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೋವು ಆಗಿತ್ತು. ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಹಿತಕ್ಕಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಪಬ್ಲಿಕ್ ಟಿವಿಗೆ ತಿಳಿಸಿದರು.
ನನ್ನ ಸ್ವಕ್ಷೇತ್ರವನ್ನು ತೊರೆದು ಒಂದು ತಿಂಗಳಾಗಿದೆ. ಎಂದೂ ನಾನು ಇಷ್ಟು ದಿನ ಕ್ಷೇತ್ರದ ಜನತೆಯೊಂದಿಗೆ ದೂರವಿಲ್ಲ. ಕೂಡಲೇ ಎಲ್ಲರೊಂದಿಗೆ ಚರ್ಚಿಸಿ ಬರುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.