ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಶರಣರು ಈಗ ಬಂಧನದ ಭೀತಿಯನ್ನು ಎದುರಿಸುವಂತಾಗಿದೆ. ಮಠದಲ್ಲಿ ಓದುತ್ತಿದ್ದ ಬಾಲಕಿಯರನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಬಾಲಕಿಯಯರು ದೂರು ನೀಡಿದ್ದು, ಈಗ ಪೋಕ್ಸೋ ಪ್ರಕರಣದ ಮೇಲೆ ಬಂಧನವಾಗುವ ಸಾಧ್ಯತೆ ಇದೆ.
ಈಗಾಗಲೇ ಮೈಸೂರಿನಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು, ಇಂದು ವೈದ್ಯಕೀಯ ಪರೀಕ್ಷೆಗೆ ಬಾಲಕಿಯರನ್ನು ಹಾಗೂ ಮುರುಘಾ ಶ್ರೀಗಳನ್ನು ಒಳಪಡಿಸುವ ಸಾಧ್ಯತೆ ಇದೆ. ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯ ಬಳಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರು ದಾಖಲಾಗಿದೆ. ಪ್ರಕರಣ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದೆ.
ಸಂತ್ರಸ್ತೆಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆತಂದು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಬಾಲಕಿಯರನ್ನು ಸಿಡಬ್ಲ್ಯೂಸಿಯಲ್ಲಿ ಕೌನ್ಸಿಲಿಂಗ್ ಅಧಿಕಾರಿಗಳ ಮುಂದೆ ಹಾಜರು ಪಡಿಸಿ ಘಟನೆಯ ವಿವರವನ್ನು ಪಡೆದುಕೊಳ್ಳಲಾಗುತ್ತದೆ. ಇದನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತೆ. ಆ ಬಾಲಕಿಯರ ಹೇಳಿಕೆಯನ್ನು ಆಧರಿಸಿ ಮೆಡಿಕಲ್ ಟೆಸ್ಟ್ಗೆ ಒಳಪಡಿಸಲಾಗುತ್ತೆ. ಇದನ್ನೂ ಓದಿ: ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು
ಸಿಡಬ್ಲ್ಯೂಸಿಯಲ್ಲಿ ದೂರು ನೀಡಿದಂತೆಯೇ ಹೇಳಿಕೆ ನೀಡಿ ಮೆಡಿಕಲ್ ಟೆಸ್ಟ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾದರೆ ಆರೋಪಿಗಳನ್ನೂ ಕೂಡ ಬಂಧಿಸಿ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತೆ. ಆರೋಪ ಸಾಬೀತಾದರೆ ಜಾಮೀನು ಸಿಗುವುದಿಲ್ಲ. ಪ್ರಕರಣ ಗಂಭೀರವಾಗ್ತಿದ್ದಂತೆ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಪರಶುರಾಮ್ ಹೇಳಿಕೆ ನೀಡಿದ್ದು, ಸಂತ್ರಸ್ತ ಬಾಲಕಿಯರಿಗೆ ಎಸ್ಕಾರ್ಟ್ ಭದ್ರತೆ ಒದಗಿಸಲಿದೆ. ವಿಚಾರಣೆ ಮುಗಿದ ಬಳಿಕ ವಾಪಸ್ ಕರೆತಂದು ಒಡನಾಡಿಯಲ್ಲೇ ಪುನರ್ ವಸತಿ ಕಲ್ಪಿಸುತ್ತೇವೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಠಕ್ಕೆ ಭಕ್ತಾದಿಗಳು, ಜನಪ್ರತಿನಿಧಿಗಳು ವಿವಿಧ ಮಠಾಧೀಶರು ಆಗಮಿಸಿ ಮುರುಘಾ ಶರಣರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಸದ್ಯ ರಾಜ್ಯದಲ್ಲಿ ಪ್ರಕರಣ ಕಾವು ಪಡೆದುಕೊಂಡಿದ್ದು ಮುಂದೆ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.