ಭಾರತದಲ್ಲಿ ಶಿವಾಲಯವಿಲ್ಲದ ಊರೇ ಇಲ್ಲ. ಹೆಚ್ಚಿನ ಶಿವಾಲಯಗಳು ನೂರಾರು ವರ್ಷಗಳಷ್ಟು ಪುರಾತನವಾಗಿವೆ, ಕೆಲ ಶಿವಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರೆ, ಇನ್ನೂ ಕೆಲ ಶಿವಾಲಯಗಳು ಊರ ಜನರ ಶ್ರೀರಕ್ಷೆಯ ನಂಬಿಕೆಯಾಗಿ ಉಳಿದಿವೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಅಸ್ಸಾಂ, ಅರುಣಾಚಲ ಪ್ರದೇಶಗಳಿಂದ ಹಿಡಿದು ಗುಜರಾತ್ ತನಕ ಪ್ರತಿಯೊಂದು ಪ್ರಾಂತ್ಯದಲ್ಲೂ ಭವ್ಯ, ಐತಿಹಾಸಿಕ ಶಿವ ದೇವಾಲಯಗಳು ಒಂದನ್ನೊಂದು ಮೀರಿಸುವಂತಿವೆ.
ಕೇದಾರನಾಥ ಮಂದಿರ, ಭಾರತದ ಸುಪ್ರಸಿದ್ಧ ಮತ್ತು ಆದ್ಯ ಶಿವ ದೇವಾಲಯ (Shiva Temple). ಅಮರನಾಥ ಕ್ಷೇತ್ರ, ಸ್ವಯಂಭೂ ಹಿಮಲಿಂಗದ ಅದ್ಭುತ ದೇವಾಲಯ. ಕಾಶೀ ವಿಶ್ವನಾಥ ದೇವಾಲಯದಿಂದಾಗಿ ಈ ಕ್ಷೇತ್ರ ಅವಿಮುಕ್ತ ಸ್ಥಾನ ಎಂದು ಪ್ರಸಿದ್ಧ. ಮಹಾಕಾಲೇಶ್ವರ, ಬಾಬಾ ಭೂತನಾಥ ಮಂದಿರ, ತುಂಗನಾಥ ಮಹಾದೇವ, ಬಾಬಾ ಬೈದ್ಯನಾಥ ಮಂದಿರ, ಸೋಮನಾಥ ದೇವಾಲಯ, ಓಂಕಾರೇಶ್ವರ, ತಾರಕೇಶ್ವರ, ತ್ರ್ಯಂಬಕೇಶ್ವರ ಸನ್ನಿಧಾನ ಇವೆಲ್ಲ ಉತ್ತರ ಭಾರತದ ಸುಪ್ರಸಿದ್ಧ ಶಿವದೇವಾಲಯಗಳಾದರೆ, ದಕ್ಷಿಣ ಭಾರತದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಚಿದಂಬರಂನ ನಟರಾಜ, ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ, ಕರ್ನಾಟಕದ ಕಡಲ ತೀರದ ಮುರುಡೇಶ್ವರ ದೇವಾಲಯ, ಕೇರಳದ ವಡಕ್ಕುನಾಥನ್ ದೇವಾಲಯ… ಹೀಗೆ ಜನಪ್ರಿಯ ಶಿವದೇವಾಲಯಗಳ ಯಾದಿ ಬಹುದೀರ್ಘವಾಗಿದೆ.
Advertisement
ಇವೆಲ್ಲ ಭಾರತದ ಶಿವದೇವಾಲಯಗಳು… ಶಿವದೇವಾಲಯಗಳ ವ್ಯಾಪ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಸದಾಶಿವನ ಕೀರ್ತಿಪತಾಕೆ ಭಾರತದ ಹೊರಗೂ ವಿಜೃಂಭಿಸುತ್ತಿದೆ. ಪಾಕಿಸ್ತಾನ (Pakistan), ಶ್ರೀಲಂಕೆಯಿಂದ ಹಿಡಿದು, ಆಗೇಯ ಏಷ್ಯಾದ ದೇಶಗಳ ತನಕ ನೂರಾರು ಜಾಗಗಳಲ್ಲಿ ಪ್ರಾಚೀನ ಶಿವಾಲಯಗಳಿವೆ. ಇದೀಗ ಪಾಶ್ಚಾತ್ಯ ದೇಶಗಳಲ್ಲೂ ಭಾರತೀಯರು ತಾವು ಹೋದ ಕಡೆಗಳಲ್ಲೆಲ್ಲ ಮುಂದಿನ ಪೀಳಿಗೆಗಾಗಿ ಭವ್ಯ ಶಿವಾಲಯ ನಿರ್ಮಿಸುತ್ತಿದ್ದಾರೆ.
Advertisement
ವರ್ಷದಿಂದ ವರ್ಷಕ್ಕೆ ಶಿವರಾತ್ರಿಯ ಸಂಭ್ರಮವನ್ನು ಆಚರಿಸುತ್ತಿರುವ ಈ ಗಡಿಯಾಚೆಗಿನ ಶಿವಾಲಯದ ಬಗ್ಗೆ ಒಂದಿಷ್ಟು ತಿಳಿಯೋಣ….
Advertisement
Advertisement
ಪಾಕಿಸ್ತಾನದ ಕಟಾಸ್ ರಾಜ್ ದೇವಾಲಯ ಚಕ್ವಾಲ್:
ಕಟಾಸ್ರಾಜ್ ಶಿವ ದೇವಾಲಯ (Katas Raj Temple) ಇರುವುದು ಪಾಕಿಸ್ತಾನದ ಪಂಜಾಬ್ ರಾಜ್ಯದ ಚಟ್ಬಾಲ್ ಜಿಲ್ಲೆಯಲ್ಲಿ, ಇದು ರಾಮಾಯಣ, ಮಹಾಭಾರತಗಳಷ್ಟೇ ಹಳೆಯದು ಎಂದು ಹೇಳುತ್ತಾರೆ. ಪಾಂಡವರು ತಮ್ಮ ವನವಾಸದ ಹೆಚ್ಚಿನ ಭಾಗವನ್ನು ಇಲ್ಲಿ ಕಳೆದಿದ್ದರು ಎಂದು ಸ್ಥಳಪುರಾಣ ಹೇಳುತ್ತದೆ.
ಕಟಾಸ್ರಾಜ್ ಎಂಬುದು ಇಲ್ಲಿರುವ ಕೊಳದ ಹೆಸರು. ಈ ಕೊಳದಲ್ಲಿ ದೈವಿಕ ಶಕ್ತಿ ಇದೆ ಎಂದು ಜನರು ನಂಬುತ್ತಾರೆ. ಸ್ಥಳಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಆತ್ಮಾಹುತಿ ಮಾಡಿಕೊಂಡಾಗ ಶಿವನ ಕಣ್ಣೀರಿನಿಂದ ಎರಡು ಕೊಳಗಳು ನಿರ್ಮಾಣವಾದವು. ಇವುಗಳಲ್ಲಿ ಒಂದು ಪುಷ್ಕರ, ಇನ್ನೊಂದು ಕೇತಾಕ್ಷ ಅರ್ಥಾತ್ ಕಣ್ಣೀರು. ಇದೇ ಶಬ್ದ ಜನರ ಬಾಯಿಯಲ್ಲಿ ʻಕಟಾಸ್ʼ ಎಂದು ಸ್ಥಳಪುರಾಣದಲ್ಲಿದೆ.
ಕಟಾಸ್ರಾಜ್ ಇರುವುದು ಭೂಮಟ್ಟದಿಂದ 2,000 ಅಡಿ ಎತ್ತರದ ಪ್ರದೇಶದಲ್ಲಿ. ಇದರ ಸುತ್ತಲೂ ಬಯಲುಭೂಮಿ ಇದೆ. ಕಟಾಸ್ರಾಜ್ನ ಸುತ್ತ ಏಳು ದೇವಾಲಯಗಳಿವೆ. ಇವುಗಳಿಗೆ ಸಾತ್ಘರ್ ಎಂದು ಹೆಸರಿದೆ. ಚೌಕಾಕಾರದ ವೇದಿಕೆಗಳ ಮೇಲೆ ನಿರ್ಮಾಣವಾಗಿರುವ ಸರಳ ವಾಸ್ತುರಚನೆಯ ಈ ದೇವಾಲಯಗಳು ಕಾಶ್ಮೀರದ ದೇವಾಲಯಗಳನ್ನು ಹೋಲುತ್ತವೆ. ಇವುಗಳಲ್ಲಿ ಸುಪ್ರಸಿದ್ಧವಾಗಿರುವುದು ಶಿವ ದೇವಾಲಯ. ಮಹಾಭಾರತ ಕಾಲದಲ್ಲಿ ಶ್ರೀಕೃಷ್ಣ ಸ್ವಯಂ ಇಲ್ಲಿನ ಶಿವ ದೇವಾಲಯ ನಿರ್ಮಿಸಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದ ಎನ್ನುತ್ತದೆ ಸ್ಥಳಪುರಾಣ. ಪಾಂಡವರು ವನವಾಸ ಕಳೆದಿದ್ದು ಇದೇ ಪರಿಸರದಲ್ಲಿ ಎಂದೂ ಸಹ ಹೇಳಲಾಗಿದೆ.
4ನೇ ಶತಮಾನದಲ್ಲಿ ಚೀನೀ ಯಾತ್ರಿ ಫಾಹಿಯಾನ್ ಇಲ್ಲಿಗೆ ಭೇಟಿ ನೀಡಿ, ಇಲ್ಲಿನ ದೇವಾಲಯಗಳ ಬಗ್ಗೆ ಬರೆದಿದ್ದ. ಗುರುನಾನಕ್ ಈ ದೇವಾಲಯಗಳಿಗೆ ಭೇಟಿ ನೀಡಿದ್ದರು, ಇಲ್ಲಿ ತಪಸ್ಸಿಗೆ ಕುಳಿತಿದ್ದರು ಎಂದು ಸಿಖ್ಖರು ನಂಬುತ್ತಾರೆ. ಸಿಕ್ಖ್ ಚಕ್ರವರ್ತಿ ರಣಜಿತ್ ಸಿಂಗ್ ಎರಡು ಬಾರಿ ಇಲ್ಲಿಗೆ ತೀರ್ಥಯಾತ್ರೆ ಮಾಡಿದ್ದ.
ಭಾರತ ವಿಭಜನೆಗೆ ಮೊದಲು ಈ ದೇವಾಲಯ ಉತ್ತರ ಭಾರತೀಯ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿತ್ತು. ಈ ದೇವಾಲಯ ಹಲವು ಸಂಪ್ರದಾಯಗಳ ಜನರ ಪವಿತ್ರ ಕ್ಷೇತ್ರವಾಗಿತ್ತು. ಹಿಂದೂಗಳು 1947ರಲ್ಲಿ ಭಾರತಕ್ಕೆ ವಲಸೆ ಹೋದರೂ ಈ ದೇವಾಲಯದ ನಂಟು ಬಿಡಲಿಲ್ಲ. ಇಂದಿಗೂ ಎಲ್ಲ ಸಂಪ್ರದಾಯಗಳ ಜನರು ಇಲ್ಲಿ ತೀರ್ಥಯಾತ್ರೆಗೆ ಬರುತ್ತಾರೆ. ಇವರು ದೇವಾಲಯದ ಮುಂದಿನ ಕೊಳದಲ್ಲಿ ಸ್ನಾನಮಾಡಿ, ದೇವಾಲಯವನ್ನು ಪ್ರವೇಶಿಸುತ್ತಾರೆ.
ಕಟಾಸ್ರಾಜ್ ಕೊಳಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಇದೆ. ವನವಾಸದ ವೇಳೆ ಯುಧಿಷ್ಠಿರನನ್ನು ಯಮಧರ್ಮರಾಯ ಯಕ್ಷನ ರೂಪದಲ್ಲಿ ಭೇಟಿಯಾಗಿ ಯಕ್ಷಪ್ರಶ್ನೆಗಳನ್ನು ಕೇಳಿದ್ದು ಇದೇ ಕೊಳದ ದಂಡೆಯ ಮೇಲೆ ಎಂದು ಸ್ಥಳಪುರಾಣ ಹೇಳುತ್ತದೆ.
1965ರ ಭಾರತ-ಪಾಕ್ ಯುದ್ಧದ ಬಳಿಕ ಇಲ್ಲಿಗೆ ಹಿಂದೂಗಳು ಬರಲು ಅನುಮತಿ ಇರಲಿಲ್ಲ. 1984ರ ತನಕವೂ ಇಲ್ಲಿಗೆ ಭೇಟಿ ನೀಡಲು ಭಾರತೀಯರಿಗೆ ಅನುಮತಿ ಸಿಗುತ್ತಿರಲಿಲ್ಲ. ಆದರೀಗ ಸ್ಥಳೀಯ ಮುಸ್ಲಿಮರು ದೇವಾಲಯಗಳ ಜಾಗದಲ್ಲಿ ನಿವಾಸ ಹೂಡಿದ್ದಾರೆ, ಕಟಾಸ್ರಾಜ್ ಕೊಳದ ನೀರನ್ನು ಕೊಳಚೆ ಹೊಂಡವಾಗಿ ಮಾಡಿದ್ದಾರೆ. ಕಟಾಸ್ರಾಜ್ ದೇವಾಲಯಗಳ ಪರಿಸರದಲ್ಲಿ ಹಲವಾರು ಬೋರ್ವೆಲ್ಗಳಿದ್ದು, ಇಲ್ಲಿನ ನೀರನ್ನು ಔದ್ಯೋಗಿಕ ಕಾರ್ಯಗಳಿಗೆ ಬಳಸುತ್ತಿರುವ ಕಾರಣ ದೇವಾಲಯದ ಮುಂದಿರುವ ಕೊಳದ ನೀರು ಬತ್ತುತ್ತಿದೆ ಎಂದು ಈಗಾಗಲೇ ಅನೇಕ ವರದಿಗಳು ತಿಳಿಸಿವೆ. ಆದರೂ ಪಾಕಿಸ್ತಾನದ ಹಿಂದೂಗಳ ಶ್ರದ್ಧಾಭಕ್ತಿ ಕಡಿಮೆಯಾಗಿಲ್ಲ. ಇಲ್ಲಿ ಶಿವರಾತ್ರಿ ಆಚರಿಸಲು ಗಣನೀಯ ಸಂಖ್ಯೆಯಲ್ಲಿ ಪಾಕಿಸ್ತಾನಿ ಹಿಂದೂಗಳು ಬರುತ್ತಾರೆ.
ಸ್ವಾತಂತ್ರ್ಯದ ಬಳಿಕ ಹಲವಾರು ದಶಕಗಳ ಕಾಲ ಈ ದೇವಾಲಯ ಸಂಕೀರ್ಣ ದುಃಸ್ಥಿತಿಯಲ್ಲಿತ್ತು. ಇವುಗಳನ್ನು ನವೀಕರಿಸಲು 2006ರಿಂದ ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ. 2005ರಲ್ಲಿ ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಇಲ್ಲಿಗೆ ಬಂದಿದ್ದರು.
ಕಟಾಸ್ರಾಜ್ನ ಸುತ್ತ ಮುತ್ತ ಶಿಲಾಯುಗದ ಸಲಕರಣೆಗಳು ಮತ್ತು ಆಯುಧಗಳು, ಮಣ್ಣಿನ ಮಡಕೆಗಳು ಹಾಗೂ ಬಳೆಗಳು ದೊರೆತಿವೆ. ಇದರ ಪಕ್ಕದ ಉಪ್ಪಿನ ಬೆಟ್ಟಗಳಲ್ಲಿ ಹಲವಾರು ಪ್ರಾಗೈತಿಹಾಸಿಕ ಪಳೆಯುಳಿಕೆಗಳಿವೆ ಎನ್ನುತ್ತಾರೆ. ಇವುಗಳಲ್ಲಿ ಮ್ಯಾಮೊತ್ ಮತ್ತು ಡೈನಾಸರ್ಗಳನ್ನು ಹೋಲುವ ಪ್ರಾಣಿಗಳ ಎಲುಬುಗಳು ಸಿಕ್ಕಿವೆ ಎಂದೂ ಹೇಳುತ್ತಾರೆ.
ಕಟಾಸ್ರಾಜ್ ದೇವಾಲಯ ಸಂಕುಲ ಇರುವುದು ಚಕ್ವಾಲ್ ಜಿಲ್ಲಾಕೇಂದ್ರದಿಂದ 40 ಕಿ.ಮೀ. ದೂರದಲ್ಲಿ. ಇಸ್ಲಾಮಾಬಾದ್-ಲಾಹೋರ್ ಮೋಟಾರ್ವೇಯಲ್ಲಿ ಸಾಗಿ, ಕಲ್ಲಾರ್-ಕಹಾರ್ ಜಂಕ್ಷನ್ ಬಳಿ ಹೊರಬಿದ್ದು, ಚೋವಾ ಸೈದನ್ ಶಾ ರಸ್ತೆಯಲ್ಲಿ 24 ಕಿ.ಮೀ. ಸಾಗಿದರೆ ಈ ದೇವಾಲಯ ಸಂಕೀರ್ಣ ಸಿಗುತ್ತದೆ.