ಮಡಿಕೇರಿ: ಗುರುವಾರ ಖಗೋಳದಲ್ಲಿ ನಡೆಯಲಿರುವ ಬೆಳಕು- ನೆರಳಿನ ಆಟದ ಅದ್ಭುತ ಕ್ಷಣಗಳಿಗೆ ವಿವಿಧೆಡೆ ಸಿದ್ಧತೆ ನಡೆಯುತ್ತಿದ್ದು, ಖಗೋಳ ಶಾಸ್ತ್ರಜ್ಞರಿಗೆ ವಿಶೇಷ ದಿನ.
2019ರಲ್ಲಿ ನಡೆಯುತ್ತಿರುವ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಮತ್ತೆ ಇಂತಹದ್ದೊಂದು ಸೂರ್ಯಗ್ರಹಣ ಸಂಭವಿಸಲು 2064ರವರೆಗೆ ಕಾಯಬೇಕು. ಗುರುವಾರ ಸಂಭವಿಸಲಿರುವ ಸೂರ್ಯಗ್ರಹಣ ಕೊಡಗು, ಕೇರಳ ಗಡಿಭಾಗವಾದ ಕುಟ್ಟ ಸಮೀಪದ ಕಾಯಿಮಾನಿಯಲ್ಲಿ ಶೇ. ನೂರರಷ್ಟು ಸಂಭವಿಸಲಿದೆ. ಹೀಗಾಗಿ ಪುಣೆಯ ಮಿಥಿ, ಕೆಆರ್ವಿಪಿ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಯಿಮಾನಿಯ ಗ್ರಾಮದ ಗದ್ದೆಯೊಂದರಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಟಿಲಿಸ್ಕೋಪ್ಗಳನ್ನು ಬಳಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳು ಬಂದ್ ಆಗಲಿವೆ. ತಲಕಾವೇರಿ, ಭಾಗಮಂಡಲ ಮತ್ತು ಓಂಕಾರೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಇಂದು ಸಂಜೆಗೆ ಪೂಜಾ ಕೈಂಕರ್ಯಗಳನ್ನು ಪೂರೈಸಲಿದ್ದು, ನಾಳೆ ಬಂದ್ ಆಗಲಿವೆ. ಹೀಗಾಗಿ ಭಕ್ತರಿಗೆ ದೇವರ ದರ್ಶನಕ್ಕೂ ಅವಕಾಶ ಇರುವುದಿಲ್ಲ.
ಭಾಗಮಂಡಲ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಮಹಾಮಂಗಳಾರತಿ ನಡೆಯಲಿದ್ದು, ಬಳಿಕ ಬಂದ್ ಆಗಲಿವೆ. ಅಲ್ಲದೆ ಪಿಂಡ ಪ್ರಧಾನಕ್ಕೂ ಅವಕಾಶ ಇರುವುದಿಲ್ಲ. ಹಾಗೆ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇವಾಲಯ ಬಂದ್ ಆಗಲಿದೆ. ಗುರುವಾರ ಆಕಾಶದಲ್ಲಿ ಬೆಳಕು-ನೆರಳಿನ ಚಿತ್ತಾರದ ಅದ್ಬುತ ಕ್ಷಣಗಳು ಜರುಗಲಿದ್ದು, ಇದನ್ನು ಖಗೋಳಶಾಸ್ತ್ರ ತಜ್ಞರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.